ಹಾವೇರಿ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ತ್ವರಿತವಾಗಿ ತಾಲ್ಲೂಕು ಕೋವಿಡ್ ಕೇರ್ ಸೆಂಟರ್ಗಳನ್ನು ಸುಸಜ್ಜಿತಗೊಳಿಸಿ ಕಾರ್ಯಾರಂಭಗೊಳಿಸುವಂತೆ ವೈದ್ಯಾಧಿಕಾರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.
ತಾಲೂಕಾ ವೈದ್ಯಾಧಿಕಾರಿಗಳೊಂದಿಗೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದ ಅವರು, ತಾಲ್ಲೂಕು ಕೋವಿಡ್ ಆಸ್ಪತ್ರೆಯಲ್ಲಿ ಕನಿಷ್ಠ 50 ಬೆಡ್ಗಳ ವ್ಯವಸ್ಥೆ ಇರಬೇಕು. ಕೇಂದ್ರೀಕೃತ ಆಮ್ಲಜನಕ ಪೂರೈಕೆ ವ್ಯವಸ್ಥೆ ಸೇರಿದಂತೆ ಪೂರ್ಣ ಪ್ರಮಾಣದ ಸೌಲಭ್ಯಗಳೊಂದಿಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ವ್ಯವಸ್ಥೆಯಾಗಬೇಕು. ಈಗಾಗಲೇ ಕೆಲ ತಾಲ್ಲೂಕುಗಳಲ್ಲಿ ಕೋವಿಡ್ ಆಸ್ಪತ್ರೆಗಳು ಕಾರ್ಯಾರಂಭಗೊಳಿಸಿದ್ದು, ಉಳಿದ ತಾಲ್ಲೂಕುಗಳಲ್ಲೂ ತ್ವರಿತವಾಗಿ ಸಿದ್ಧಗೊಳಿಸಬೇಕು. ಹಾಗೆಯೇ ಜಿಲ್ಲಾ ಆಸ್ಪತ್ರೆಯಲ್ಲಿ ಕನಿಷ್ಠ 125 ಹಾಸಿಗೆಗೆ ಸೌಲಭ್ಯ ವಿಸ್ತರಿಸಿ ಎಂದು ಹೇಳಿದರು.
ಜಿಲ್ಲೆಯಲ್ಲಿರುವ ತಜ್ಞವೈದ್ಯರಿಗೆ ತಾಲ್ಲೂಕುವಾರು ಉಸ್ತುವಾರಿ ವಹಿಸಬೇಕು. ಹೆಚ್ಚುವರಿ ತಜ್ಞವೈದ್ಯರ ಅಗತ್ಯಬಿದ್ದರೆ ಖಾಸಗಿ ವೈದರ ಸೇವೆ ಬಳಸಿಕೊಳ್ಳಬೇಕು. ಎಲ್ಲ ತಾಲ್ಲೂಕು ಕೋವಿಡ್ ಆಸ್ಪತ್ರೆಗಳಿಗೆ ವೆಂಟಿಲೇಟರ್ಒದಗಿಸಬೇಕು. ಹೆಚ್ಚುವರಿಯಾಗಿ ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ಯಾನರ್ ಖರೀದಿಸಿ ಪೂರೈಸುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಸೋಂಕು ಇದ್ದರೂ ರೋಗ ಲಕ್ಷಣ ರಹಿತರು ಮನೆಗಳಲ್ಲೇ ಇದ್ದು ಚಿಕಿತ್ಸೆ ಪಡೆಯಲು ಸರ್ಕಾರ ನಿಯಮ ರೂಪಿಸಿದೆ. ಮನೆಯಲ್ಲಿ ಪ್ರತ್ಯೇಕ ರೂಂ, ಶೌಚಾಲಯ ವ್ಯವಸ್ಥೆಗಳಿದ್ದರೆ ರೋಗಿಗಳು ಬಯಸಿದರೆ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬಹುದು. ಇವರಿಗೆ ಜಿಲ್ಲಾ ವೈದ್ಯಕೀಯ ತಂಡ ಟೆಲಿಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ನೀಡಬಹುದು ಹಾಗೂ ವೈದ್ಯರು ರೌಂಡ್ಸ್ನಿಂದ ಚಿಕಿತ್ಸೆ ನೀಡಬಹುದು. ಇಂತಹ ಸಾಧ್ಯತೆಗಳನ್ನು ಪರಿಶೀಲಿಸಿ ಎಂದು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಡಾ.ಪಿ.ಆರ್.ಹಾವನೂರ, ಡಾ.ಪ್ರಭಾಕರ ಕುಂದೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.