ಹಾವೇರಿ: ಮನುಷ್ಯರು ತೀರಿಕೊಂಡಾಗ ಅಂತ್ಯಕ್ರಿಯೆ ಮಾಡಿದ ನಂತರದ ದಿನಗಳಲ್ಲಿ ದಿವಸ ಮಾಡುವುದು ಸಾಮಾನ್ಯ ಸಂಗತಿ. ಹೋರಿ ತೀರಿಹೋದ ಬಳಿಕ ಐದು ದಿನಗಳಿಗೆ ಹೋರಿಯ ಮಾಲೀಕರು ತಿಥಿ ಮಾಡಿದ್ದಾರೆ.
ತಾಲ್ಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ ರೈತನೊಬ್ಬ ತನ್ನ ನೆಚ್ಚಿನ ಹೋರಿ ತೀರಿಹೋದ ಐದು ದಿನಗಳಿಗೆ ತಿಥಿ ಕಾರ್ಯ ಮಾಡುವ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ. ‘ಹಠವಾದಿ’ ಎಂಬ ಹೋರಿ ತೀರಿಕೊಂಡು ಐದನೇ ದಿನವಾದ ಶನಿವಾರ ಸುರೇಶ್ ಅದರ ತಿಥಿ ಕಾರ್ಯ ಮಾಡಿದರು. ಹೋರಿಯ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರು. ಉಡುಪು ಮತ್ತು ಇಷ್ಟವಾದ ಆಹಾರ ಪದಾರ್ಥಗಳನ್ನ ನೈವೇದ್ಯ ಮಾಡಿದರು.
ಅಭಿಮಾನಿಗಳು ಮತ್ತು ಗ್ರಾಮದ ಸಾವಿರಾರು ಜನರಿಗೆ ತಿಥಿ ಊಟದ ವ್ಯವಸ್ಥೆ ಮಾಡಲಾಗಿತ್ತು. ತಿಥಿ ಕಾರ್ಯಕ್ಕೆ ಬಂದಿದ್ದ ಅಭಿಮಾನಿಗಳು ಹಠವಾದಿಯ ಓಟದ ದಿನಗಳನ್ನು ನೆನಪು ಮಾಡಿಕೊಂಡರು.
20 ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಮಳವಳ್ಳಿಯಿಂದ ₹42 ಸಾವಿರ ಕೊಟ್ಟು ಹೋರಿ ತಂದಿದ್ದರು. ಮಗನಂತೆ ಜೋಪಾನ ಮಾಡಿದ್ದರು. ಗತ್ತು ಗಮ್ಮತ್ತು ಪ್ರದರ್ಶಿಸಿದ ಹೋರಿಗೆ ಗ್ರಾಮಸ್ಥರು ಹಠವಾದಿ ಎಂದು ನಾಮಕರಣ ಮಾಡಿದ್ದರು. 2002ರಿಂದ ಆರಂಭವಾದ ಹೋರಿಯ ಸ್ಪರ್ಧೆಯಲ್ಲಿಹಠವಾದಿ ಎಲ್ಲಿಯೇ ಸ್ಪರ್ಧಿಸಲಿ ಬಹುಮಾನ ಕಟ್ಟಿಟ್ಟ ಬುತ್ತಿ ಎಂಬುದು ಅಭಿಮಾನಿಗಳ ನಂಬಿಕೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.