
ಹಾವೇರಿ: ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಸರ್ಕಾರ ಕೊಡಬೇಕು ರೈತ ಮಹಿಳೆ ಕವಿತಾ ಮಿಶ್ರಾ ಆಗ್ರಹಿಸಿದರು
ನಗರದ ಭಗತ್ಸಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜಿನ ವಾರ್ಷಿಕೋತ್ಸವ ಮತ್ತು ಭಗತ್ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಸಮಾಜ ಹಿಂದೇಟು ಹಾಕಬಾರದು. ರೈತ ಮನಸ್ಸು ಮಾಡಿದರೆ ಕೇವಲ ಒಂದು ಎಕರೆಯಲ್ಲಿ ಕೋಟಿ ಗಳಿಸಬಹುದು. ನಾನು ರೈತನ ಮಗಳು ಎಂದು ಹೆಮ್ಮೆಯಿಂದ ಹೇಳಿ. ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯನ್ನು ಇಲ್ಲಿ ಸ್ಮರಿಸಿದರು. ಧರ್ಮ ಮತ್ತು ಕರ್ಮ ರೈತರಲ್ಲೇ ಉಳಿದಿದೆ. ರೈತರಿಗೆ ನಿಜವಾಗಲೂ ಸಿಗಬೇಕಾದ ಗೌರವ ಸಿಗಲಿ ಎಂದು ಆಶಿಸುತ್ತೇನೆ ಎಂದರು.
ಧಾರವಾಡದ ಜಿನಿಯಸ್ ಅಕಾಡೆಮಿ ಅಧ್ಯಕ್ಷ ಅಲ್ತಾಪಹ್ಮದ ಡುಮ್ಮಾಳರ ಮಾತನಾಡಿ, ಭಗತ್ ಪ್ರಥಮ ದರ್ಜೆ ಕಾಲೇಜು ಸ್ಪರ್ಧಾತ್ಮಕ ಪರೀಕ್ಷೆಗಳನ್ನೊಳಗೊಂಡ ಶಿಕ್ಷಣವನ್ನು ನೀಡುತ್ತಿದ್ದು ನೀವು ಪದವಿ ಪಡೆಯುವ 3 ವರ್ಷದೊಳಗಾಗಿ ಸರ್ಕಾರ ಕರೆಯುವ ಎಲ್ಲ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ನಿಮ್ಮನ್ನು ಈ ಕಾಲೇಜು ಸಿದ್ಧಗೊಳಿಸುತ್ತದೆಂದು ತಿಳಿಸಿದರು.
ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಸ್ಥಾಪಕ ಎಂ.ಬಿ.ಸತೀಶ ಮಾತನಾಡಿ, ನಮ್ಮೆಲ್ಲ ಉಪನ್ಯಾಸಕರು ಅವರ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಈ ವರ್ಷ ಸಂಪೂರ್ಣವಾಗಿ ಫಲಿತಾಂಶದ ಕಡೆ ಒತ್ತುಕೊಟ್ಟಿದ್ದೇವೆ. ಫಲಿತಾಂಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಎಲ್ಲ ಪಾಲಕರು ನಮಗೆ ಸಂಪೂರ್ಣ ಸಹಕಾರ ನೀಡಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ನಮ್ಮ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಕುಂದಗೋಳ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕ ವೀಂದ್ರಗೌಡ ಪಾಟೀಲ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ರತನ ಕಾಶಪ್ಪನವರ, ಕಾಲೇಜಿನ ಉಪನ್ಯಾಸಕಿ ಆಸ್ಮಾ ತಳಕಲ್ಲ, ರಶ್ಮಿ ಬಾಗರ ವ್ಯಕ್ತಿ ಪರಿಚಯ ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.