ವಿಜಯ ಮಹಾಂತೇಶ
ಹಾವೇರಿ: ಜಿಲ್ಲೆಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದಂದು ಬ್ಯಾನರ್ ಮತ್ತು ಬಂಟಿಂಗ್ಸ್ ಪ್ರದರ್ಶಿಸಲು ಸ್ಥಳೀಯ ಆಡಳಿತ ಸಂಸ್ಥೆಗಳ ಅನುಮತಿ ಕಡ್ಡಾಯಗೊಳಿಸಲಾಗಿದ್ದು, ಈ ಸಂಬಂಧ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
‘ಗಣೇಶ ಹಬ್ಬ ಮತ್ತು ಈದ್ -ಮಿಲಾದ್ ಹಬ್ಬದ ಸಂದರ್ಭದಲ್ಲಿ ಬ್ಯಾನರ್–ಬಂಟಿಂಗ್ಗಳನ್ನು ಕಟ್ಟುವಾಗ ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ನಂತರ, ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಾದ ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಯಿಂದಲೂ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
‘ಬ್ಯಾನರ್ ಮತ್ತು ಬಂಟಿಂಗ್ಗಳಲ್ಲಿ ಗಣೇಶ ಹಬ್ಬ–ಈದ್ -ಮಿಲಾದ ಹಬ್ಬಕ್ಕೆ ಸಂಬಂಧಪಟ್ಟ ವಿಷಯವನ್ನು ಮಾತ್ರ ನಮೂದಿಸಿರಬೇಕು. ಅನ್ಯ ಧರ್ಮದ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ವಿಷಯಗಳಿರಬಾರದು. ಕಾನೂನು ಬಾಹಿರ ವಿಷಯ ಮುದ್ರಿಸಬಾರದು. ನಿಗದಿಪಡಿಸಿದ ಅವಧಿ ಮುಗಿದ ತಕ್ಷಣ ಬ್ಯಾನರ್ ಮತ್ತು ಬಂಟಿಂಗ್ಗಳನ್ನು ಸ್ವಯಂ ಸೇವಕರಿಂದ ತೆರವುಗೊಳಿಸಬೇಕು.’
‘ಬ್ಯಾನರ್–ಬಂಟಿಂಗ್ಗಳು ಯಾವುದೇ ಕಾರಣಕ್ಕೂ ಹರಿದು ಬೀಳದಂತೆ, ಹಾಳಾಗದಂತೆ ಆಯೋಜಕರು ನೋಡಿಕೊಳ್ಳಬೇಕು. ಬ್ಯಾನರ್–ಬಂಟಿಂಗ್ಸ್ ವಿಚಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾದರೆ, ಅನುಮತಿ ಪಡೆದವರ ವಿರುದ್ಧವೇ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.