
ಹಾವೇರಿ: ತಾಲ್ಲೂಕಿನ ಸಂಗೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಭೈರನಪಾದದಲ್ಲಿ ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಜಿ.ಎಂ. ಶುಗರ್ಸ್ ಕಂಪನಿಗೆ ₹ 2.45 ಕೋಟಿ ವಂಚನೆಯಾಗಿದ್ದು, ಈ ಸಂಬಂಧ 22 ಆರೋಪಿಗಳ ವಿರುದ್ಧ ರಟ್ಟೀಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಜಿ.ಎಂ. ಶುಗರ್ಸ್ ಕಂಪನಿಯ ಕಬ್ಬು ಕಟಾವು ಮತ್ತು ಸಾಗಾಣಿಕೆ ವಿಭಾಗದ ಜನರಲ್ ಮ್ಯಾನೇಜರ್ ರಾಜಶೇಖರ ಎ.ಎಂ. (51) ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅದರನ್ವಯ, ಮಹಾರಾಷ್ಟ್ರದ 22 ಗ್ಯಾಂಗ್ಮನ್ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ರಟ್ಟೀಹಳ್ಳಿ ಠಾಣೆ ಪೊಲೀಸರು ತಿಳಿಸಿದರು.
‘ಕಂಪನಿ ವತಿಯಿಂದ ನಡೆಯುತ್ತಿರುವ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ವರ್ಷವೂ ಕಬ್ಬು ಕಟಾವು ಮಾಡಲು ಮಹಾರಾಷ್ಟ್ರದಿಂದ ಗ್ಯಾಂಗ್ಮನ್ಗಳು (ಕಾರ್ಮಿಕರು) ಬರುತ್ತಾರೆ. ಕಂಪನಿಯವರು ಸೂಚಿಸಿದ ರೈತರ ಜಮೀನಿನಲ್ಲಿ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುವ ಕೆಲಸ ಮಾಡುತ್ತಾರೆ. ಈ ಕೆಲಸಕ್ಕಾಗಿ ಕಂಪನಿಯವರು ಮುಂಗಡ ಹಣ ನೀಡುತ್ತಾರೆ. ಶ್ಯೂರಿಟಿಯಾಗಿ ಕರಾರು ಪತ್ರ ಪಡೆಯುತ್ತಾರೆ’ ಎಂದು ಹೇಳಿದರು.
‘2025–26ನೇ ಸಾಲಿನಲ್ಲಿ ಕಟ್ಟು ಕಟಾವು ಮಾಡಿ ಸಾಗಾಣಿಕೆ ಮಾಡುವುದಾಗಿ ಹೇಳಿದ್ದ 22 ಗ್ಯಾಂಗ್ಮನ್ಗಳು, 2025ರ ಮೇ 15ರಂದು ಚಟ್ಟನಹಳ್ಳಿಯಲ್ಲಿರುವ ಕಂಪನಿಯ ಕಚೇರಿಗೆ ಬಂದಿದ್ದರು. ದೂರುದಾರ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು. ಕೆಲಸಕ್ಕೆ ಬರುವುದಾಗಿ ಹೇಳಿ, ಕಂಪನಿಯ ನಿಯಮಗಳನ್ನು ಒಪ್ಪಿಕೊಂಡಿದ್ದರು. ನಂತರ, 2025ರ ಅಕ್ಟೋಬರ್ 23ರವರೆಗೆ ಹಂತ ಹಂತವಾಗಿ ₹ 2.45 ಕೋಟಿ ಹಣವನ್ನು ವಿವಿಧ ಖಾತೆಗಳಿಗೆ ಹಾಕಿಸಿಕೊಂಡಿದ್ದರು. ಇದಾದ ನಂತರ, ಆರೋಪಿಗಳು ಕೆಲಸಕ್ಕೆ ಬಂದಿಲ್ಲ. ಸಂಪರ್ಕಕ್ಕೂ ಸಿಕ್ಕಿಲ್ಲವೆಂದು ದೂರುದಾರರು ತಿಳಿಸಿದ್ದಾರೆ. ಜೊತೆಗೆ, ಹಣದ ವ್ಯವಹಾರದ ಬಗ್ಗೆ ದಾಖಲೆಗಳನ್ನೂ ನೀಡಿದ್ದಾರೆ’ ಎಂದರು.
‘ಮಹಾರಾಷ್ಟ್ರದ ಸಂತೋಷ ರಾಥೋಡ್, ಸುನೀಲ್ ರಾಥೋಡ್, ಮಂತ್ರಿ ಚವ್ಹಾಣ, ಅಮೂಲ್ ಆಡೆ, ಅಂಕುಶ್ ಆಡೆ, ಆಶಾ ಜಾಧವ್, ಬಲಿತಾಮ್ ದೇವಕತೆ, ಚಿತ್ರಗಂಧ ದೇವಕತೆ, ಚಿಲ್ಕುರಿ ಸುದೀಪ್ ಶ್ರೀನಿವಾಸ್ರಾವ್, ಧರ್ಮರಾಜ್ ಚವ್ಹಾಣ, ದಿಲೀಪ್ ರಾಥೋಡ್, ಜಲೀಲ್ ಖಲೀಲ್ ಅಹ್ಮದ್ ಖಾನ್ ದೇಶಮುಖ, ಲಕ್ಷ್ಮಣ ಲಾಡೆ, ವೈಭವ್ ಲಾಡೆ, ಮಧುಕರ್ ರಾಥೋಡ್, ಮಹಾದೇವ ಪವಾರ, ಮಿಸಾಲ್ ಶಿವಾಜಿ, ರಜನಿಕಾಂತ್ ಚವ್ಹಾಣ, ರಾಮ್ಸಾಹೇಬ್ ಪವಾರ, ಅಪ್ಪರಾವ್ ರಾಥೋಡ್, ಲಾಹೂ ರಾಥೋಡ್, ಶಂಕರ್ ಚವ್ಹಾಣ ಎಂಬುವವರೇ ಆರೋಪಿಗಳು. ಇವರೆಲ್ಲರೂ ಮಹಾರಾಷ್ಟ್ರದಲ್ಲಿದ್ದಾರೆ. ಅಲ್ಲಿಯ ಸ್ಥಳೀಯ ಪೊಲೀಸರು ನೆರವು ಪಡೆದು ಆರೋಪಿಗಳನ್ನು ಪತ್ತೆ ಮಾಡಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.