ಹಾವೇರಿ: ತಾಲ್ಲೂಕಿನ ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಪ್ರಾಂಶುಪಾಲ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೋಮವಾರ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ನಿವೃತ್ತ ಪ್ರಾಂಶುಪಾಲ ಡಾ.ಕೆ.ಬಿ.ಪ್ರಕಾಶ್, ಕಚೇರಿ ಅಧೀಕ್ಷಕರಾದ ಎಚ್.ವಾಸುದೇವ, ಗುರಪ್ಪ ಸುಂಕದವರ, ಪ್ರಥಮ ದರ್ಜೆ ಸಹಾಯಕಿ ಜಯಮ್ಮ ಕಾಚೇರ, ದ್ವಿತೀಯ ದರ್ಜೆ ಸಹಾಯಕರಾದ ರವೀಂದ್ರಕುಮಾರ ಮತ್ತು ಅನಿಲಕುಮಾರ ಕಟಿಗಾರ ವಿರುದ್ಧ ಕಾಲೇಜಿನ ಹಾಲಿ ಪ್ರಾಂಶುಪಾಲ ಡಾ.ಜಗದೀಶ ಕೋರಿ ದೂರು ನೀಡಿದ್ದಾರೆ.
2007 ಅಕ್ಟೋಬರ್ 1ರಿಂದ 2022 ಏಪ್ರಿಲ್ 30ರ ಅವಧಿಯಲ್ಲಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ಕಾಲೇಜಿನ ಸರ್ಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿದ್ದಾರೆ. ಕಾಲೇಜಿನ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಸಿಸಿಟೆಕ್, ಸ್ಕಾಲರ್ಶಿಪ್, ವಿದ್ಯಾರ್ಥಿ ಶೈಕ್ಷಣಿಕ ಸಾಲದ ಹಣ ಸೇರಿದಂತೆ ಒಟ್ಟು ₹3.14 ಕೋಟಿಯನ್ನು ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಲೇಜಿನ ಅವ್ಯವಹಾರದ ಬಗ್ಗೆ ಪ್ರಜಾವಾಣಿಯಲ್ಲಿ ‘ವಿದ್ಯಾಸಿರಿ ಸ್ಕಾಲರ್ಶಿಪ್ಗೆ ಕನ್ನ!’ ವಿಶೇಷ ವರದಿ ಸೇರಿದಂತೆ ಸರಣಿ ತನಿಖಾ ವರದಿಗಳು ಪ್ರಕಟವಾದ ನಂತರ ತಾಂತ್ರಿಕ ಶಿಕ್ಷಣ ಇಲಾಖೆ ಭಾನುವಾರ ಐವರು ಸರ್ಕಾರಿ ನೌಕರರನ್ನು ಅಮಾನತು ಮಾಡಿತ್ತು. ಸೋಮವಾರ 6 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮ ಕೈಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.