ADVERTISEMENT

ಹಾವೇರಿ | ಜಂಟಿ ಸಮೀಕ್ಷೆ: ನಿರಂತರ ಮಳೆಯಿಂದ 17,022 ಹೆಕ್ಟೇರ್ ಬೆಳೆಹಾನಿ

ತಹಶೀಲ್ದಾರ್‌ಗಳಿಂದ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:12 IST
Last Updated 20 ಸೆಪ್ಟೆಂಬರ್ 2025, 4:12 IST
ಹಾವೇರಿ ಜಿಲ್ಲೆಯ ಚಿಕ್ಕಬಾಸೂರು ಬಳಿ ಮೆಕ್ಕೆಜೋಳ ಬೆಳೆ ಹಾಳಾಗಿರುವುದು 
ಹಾವೇರಿ ಜಿಲ್ಲೆಯ ಚಿಕ್ಕಬಾಸೂರು ಬಳಿ ಮೆಕ್ಕೆಜೋಳ ಬೆಳೆ ಹಾಳಾಗಿರುವುದು    

ಹಾವೇರಿ: ‘ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 17,022 ಹೆಕ್ಟೇರ್‌ ಬೆಳೆ ಹಾನಿಯಾಗಿದೆ’ ಎಂಬುದಾಗಿ ಜಂಟಿ ಸಮೀಕ್ಷೆಯ ವರದಿ ಸಿದ್ಧವಾಗಿದ್ದು, ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ.

2025–26ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ ಹಾಗೂ ಅತೀವೃಷ್ಟಿಯಿಂದ ಬೆಳೆ ಹಾನಿಯಾದ ಬಗ್ಗೆ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ.

‘ಹಾವೇರಿ ಜಿಲ್ಲೆಯಲ್ಲಿ ಅತಿಯಾದ ಮಳೆ ಹಾಗೂ ನಿರಂತರ ಮಳೆಯಿಂದಾಗಿ 16,682 ಹೆಕ್ಟೇರ್ ಕೃಷಿ ಪ್ರದೇಶ ಹಾಗೂ 340 ಹೆಕ್ಟೇರ್ ತೋಟಗಾರಿಕಾ ಬೆಳೆ ಪ್ರದೇಶದಲ್ಲಿ ಹಾನಿಯಾಗಿರುವುದು ಜಂಟಿ ಸಮೀಕ್ಷೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

‘ನಿರಂತರ ಮಳೆಯಿಂದ ಉಂಟಾದ ಬೆಳೆಹಾನಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಜರುಗಿಸಲಾಗಿದೆ. ತಾಲ್ಲೂಕುವಾರು ಬೆಳೆಹಾನಿ ಕ್ಷೇತ್ರದ ಬಗ್ಗೆ ತಹಶೀಲ್ದಾರ್‌ಗಳು ವರದಿ ಸಲ್ಲಿಸಿದ್ದಾರೆ. ಜೊತೆಗೆ, ರೈತರ ಕರಡು ಪಟ್ಟಿಯೂ ಸಿದ್ಧವಾಗಿದೆ’ ಎಂದು ಹೇಳಿದ್ದಾರೆ.

ಆಕ್ಷೇಪಣೆಗೆ 24ರವರೆಗೆ ಅವಕಾಶ

ಜಂಟಿ ಸಮೀಕ್ಷೆಯ ಪರಿಶೀಲನಾ ವರದಿಯಂತೆ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಬೆಳ ಹಾನಿಯಾದ ರೈತರ ಕರಡು ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರರ ಕಚೇರಿ, ಗ್ರಾಮ ಪಂಚಾಯತ್ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಜಂಟಿ ಸಮೀಕ್ಷೆ ಹಾಗೂ ಪಟ್ಟಿಯ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ, ಲಿಖಿತವಾಗಿ ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರ, ಕೃಷಿ, ತೋಟಗಾರಿಕಾ ಕಚೇರಿಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸಲು ಸೆ. 24 ಕೊನೆ ದಿನವಾಗಿದೆ.

‘ಸೆ. 24ರ ಸಂಜೆ 5 ಗಂಟೆಯೊಳಗೆ ಸಲ್ಲಿಕೆಯಾಗುವ ಆಕ್ಷೇಪಣೆ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಲಾಗುವುದು. ರೈತರ ಅಂತಿಮ ಪಪಟ್ಟಿಯನ್ನು ಅಂತಿಮಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಂದಾಜು 22,000 ಹೆಕ್ಟೇರ್: ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಜಿಟಿ ಜಿಟಿ ಮಳೆಯಿಂದಾಗಿ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ 4 ಸಾವಿರಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದರು. ಅಂದಾಜು 22,000 ಹೆಕ್ಟೇರ್‌ ಬೆಳೆ ಹಾನಿಯಾಗಿರುವ ಬಗ್ಗೆ ಜಿಲ್ಲಾಡಳಿತ ಪಟ್ಟಿ ಸಿದ್ಧಪಡಿಸಿತ್ತು.

ಅದೇ ಪಟ್ಟಿ ಆಧರಿಸಿ ಸಮೀಕ್ಷೆ ನಡೆಸಿದ್ದ ಜಿಲ್ಲಾಡಳಿತ, 22,000 ಹೆಕ್ಟೇರ್‌ ಪೈಕಿ 17,022 ಹೆಕ್ಟೇರ್‌ನಲ್ಲಿ ಮಾತ್ರ ಹಾನಿ ಆಗಿರುವುದಾಗಿ ವರದಿ ಸಲ್ಲಿಸಿದೆ. ಈ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರೈತರು, ಇದೊಂದು ಅವೈಜ್ಞಾನಿಕ ವರದಿಯೆಂದು ಆರೋಪಿಸುತ್ತಿದ್ದಾರೆ.

‘ಜಿಲ್ಲೆಯಲ್ಲಿ ಓಡಾಡಿದರೆ, ರಸ್ತೆಯ ಅಕ್ಕ–ಪಕ್ಕದಲ್ಲಿರುವ ಮೆಕ್ಕೆಜೋಳ ನೆಲಕಚ್ಚಿ ಒಣಗಿ ಹೋಗಿದೆ. ಆದರೆ, ಅಧಿಕಾರಿಗಳು ಹಾನಿಯಾಗಿಲ್ಲವೆಂದು ಹೇಳುತ್ತಿರುವುದು ಸರಿಯಲ್ಲ. ಕೆಲ ಅಧಿಕಾರಿಗಳು, ಕಚೇರಿಯಲ್ಲಿ ಕುಳಿತು ವರದಿ ಸಿದ್ಧಪಡಿಸಿದಂತೆ ಕಾಣುತ್ತಿದೆ. ಪ್ರತಿಯೊಂದು ಹೊಲಕ್ಕೆ ಹೋಗಿ ಸಮೀಕ್ಷೆ ನಡೆಸಿಲ್ಲ’ ಎಂದು ರೈತರು ದೂರಿದರು.

15 ದಿನ ಕಾಲಾವಕಾಶಕ್ಕೆ ಆಗ್ರಹ

‘ಜಂಟಿ ಸಮೀಕ್ಷೆಯಲ್ಲಿ ತೋರಿಸಿರುವ ಅಂಕಿ–ಅಂಶಕ್ಕೂ ವಾಸ್ತವಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಜಂಟಿ ಸಮೀಕ್ಷೆ ವರದಿ ಅವೈಜ್ಞಾನಿಕವಾಗಿದೆ. ನಿರಂತರ ಮಳೆ ಹಾಗೂ ಜಿಟಿ ಜಿಟಿ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು ಜಿಲ್ಲೆಯಲ್ಲಿ ಹಸಿರು ಬರಗಾಲ ಘೋಷಣೆ ಮಾಡಬೇಕು’ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದ್ದಾರೆ. ಪ್ರಕಟಣೆ ನೀಡಿರುವ ಅವರು ‘ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡಿಲ್ಲ. ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಹಾವೇರಿ ಜಿಲ್ಲೆಯಲ್ಲಿ ಕಾಟಾಚಾರಕ್ಕೆ ಬೆಳೆ ಹಾನಿ ಸಮೀಕ್ಷೆ ಮಾಡಿದೆ. ಜೊತೆಗೆ ಸಮೀಕ್ಷೆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಜಿಲ್ಲಾಧಿಕಾರಿಯವರು ಸೆ. 24ರವರೆಗೆ ಕಾಲಾವಕಾಶ ನೀಡಿದ್ದಾರೆ. ನಾಲ್ಕು ದಿನದಲ್ಲಿ ರೈತರು ಆಕ್ಷೇಪಣೆ ಹೇಗೆ ಸಲ್ಲಿಸುವುದು. ಅಧಿಕಾರಿಗಳನ್ನೇ ಹೊಲಕ್ಕೆ ಕಳುಹಿಸಿ ಆಕ್ಷೇಪಣೆ ಸ್ವೀಕರಿಸುವ ವ್ಯವಸ್ಥೆಯಾಗಬೇಕು. ಅಧಿಕಾರಿಗಳು ಎ.ಸಿ. ಕಚೇರಿಯಲ್ಲಿ ಕುಳಿತು ಮಾತನಾಡುವ ಬದಲು ಜಮೀನಿಗೆ ಹೋಗಿ ಪರಿಶೀಲಿಸಬೇಕು. ಅವಾಗಲೇ ರೈತರ ಕಷ್ಟ ಗೊತ್ತಾಗುತ್ತದೆ’ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ‘ಆಕ್ಷೇಪಣೆ ಸಲ್ಲಿಸಲು ಕನಿಷ್ಠ 15 ದಿನಗಳವರೆಗೆ ಅವಕಾಶ ನೀಡಬೇಕು. ಜಿಲ್ಲೆಯನ್ನು ಹಸಿರು ಬರಗಾಲ ಎಂದು ಘೋಷಣೆ ಮಾಡಿ ರೈತರ ಎಲ್ಲ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.