ADVERTISEMENT

ಹಾವೇರಿ | ವೈದ್ಯರ ಸೇವೆಗೆ ಬೆಲೆ ಕಟ್ಟಲಾಗದು: ಗುಣಮುಖರಾದ ನಗರಸಭೆ ಸದಸ್ಯರ ಮಾತು

ಸಿದ್ದು ಆರ್.ಜಿ.ಹಳ್ಳಿ
Published 1 ಆಗಸ್ಟ್ 2020, 12:29 IST
Last Updated 1 ಆಗಸ್ಟ್ 2020, 12:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಹಾವೇರಿ: ‘ಸಿಬ್ಬಂದಿ ಕೊರತೆಯ ನಡುವೆಯೂ ರಾಣೆಬೆನ್ನೂರು ತಾಲ್ಲೂಕು ಆಸ್ಪತ್ರೆ ವೈದ್ಯರು ಮತ್ತು ಶುಶ್ರೂಷಕಿಯರು ಉತ್ತಮ ಸೇವೆ ಮಾಡುತ್ತಿದ್ದಾರೆ. ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆ ಮೂಲಕ ಕೊರೊನಾ ಸೋಂಕಿತರನ್ನು ಗುಣಮುಖರನ್ನಾಗಿ ಮಾಡುತ್ತಿದ್ದಾರೆ’ ಎಂದು ಕೋವಿಡ್‌ ಗೆದ್ದು ಬಂದ ರಾಣೆಬೆನ್ನೂರು ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಹೇಳಿದರು.

ಮಲ್ಲಿಕಾರ್ಜುನ ಬಿ.ಅಂಗಡಿ

ನಾನು ಮೆಡಿಕಲ್‌ ಸ್ಟೋರ್‌ ನಡೆಸುತ್ತಿರುವುದರಿಂದ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದೆ. ಸದಾ ಮಾಸ್ಕ್‌ ಧರಿಸುವುದು ಮತ್ತು ಸ್ಯಾನಿಟೈಸರ್‌ ಬಳಕೆಗೆ ಒತ್ತು ನೀಡಿದ್ದೆ. ಆದರೆ, ಇದ್ದಕ್ಕಿದ್ದಂತೆ ಒಂದು ರಾತ್ರಿ ಜ್ವರ ಕಾಣಿಸಿಕೊಂಡಿತು, ಜತೆಗೆ ಗಂಟಲು ಕೆರೆತ, ಕಫದ ಸಮಸ್ಯೆ ಉಂಟಾಯಿತು. ಹೀಗಾಗಿ ಜುಲೈ 21ರಂದು ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಂಡೆ. ನಿರೀಕ್ಷಿಸಿದಂತೆ, ಜುಲೈ 26ರಂದು ವರದಿ ‘ಪಾಸಿಟಿವ್‌‘ ಬಂದಿತು.

ಮನೆಯವರಿಗೆ ಧೈರ್ಯ ಹೇಳಿ, ಬಟ್ಟೆ ಪ್ಯಾಕ್‌ ಮಾಡಿಕೊಂಡು ಬೈಕ್‌ನಲ್ಲೇ ಕೋವಿಡ್‌ ವಾರ್ಡ್‌ಗೆ ಹೋದೆ. ಅಲ್ಲಿ ಪುಟ್ಟ ಪುಟ್ಟ ಮಕ್ಕಳು ಕೂಡ ಇದ್ದರು. ಅಲ್ಲಿನ ಚಿಕಿತ್ಸೆ, ಉತ್ತಮ ವಾತಾವರಣ ನೋಡಿದ ಮೇಲೆ ಮನೆಯವರಿಗೆ ಕರೆ ಮಾಡಿ ನಾನು ಆರಾಮಾಗಿದ್ದೇನೆ. ನೀವು ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಸೋಂಕಿತರ ರಕ್ತ ಪರೀಕ್ಷೆ, ಬಿ.ಪಿ, ಶುಗರ್‌ ತಪಾಸಣೆ ಮಾಡುವುದು, ಊಟ ಕೊಡುವುದು... ಹೀಗೆ ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಸೇವೆ ಮಾಡುತ್ತಿದ್ದರು. ಅವರ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆ ಅವರ ಮೇಲಿದ್ದ ಗೌರವವನ್ನು ಹೆಚ್ಚಿಸಿತು.

ADVERTISEMENT

ಜುಲೈ 31ರಂದು ನಾನು ಗುಣಮುಖನಾಗಿ ಮನೆಗೆ ಬಂದೆ.ನನ್ನ ವಾರ್ಡ್‌–10ರಲ್ಲಿ ಗಟಾರ ಸ್ವಚ್ಛತೆ, ಕ್ರಿಮಿನಾಶಕ ಸಿಂಪಡಣೆ ಮಾಡಿಸಿ, ಸ್ವಚ್ಛತೆ ಕಾಯ್ದುಕೊಳ್ಳುವಂತೆ ನಿವಾಸಿಗಳಿಗೆ ಮನವಿ ಮಾಡಿದ್ದೇನೆ.ಸೋಂಕಿನಲಕ್ಷಣ ಕಂಡಾಗತಕ್ಷಣ ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆಯಿರಿ. ಈ ಮೂಲಕ ನಿಮ್ಮ ಕುಟುಂಬ ಮತ್ತು ಸಮಾಜವನ್ನು ರಕ್ಷಿಸಿ ಎಂಬುದು ನನ್ನ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.