ಹಾವೇರಿ: ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಗುರುವಾರ ಹಣ್ಣು ತರಕಾರಿ ದರ ಸ್ಥಿರವಾಗಿದೆ. ನಿಂಬೆಹಣ್ಣು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿದೆ. ಗ್ರಾಹಕರಿಂದ ಖರೀದಿಯೂ ಜೋರಾಗಿದೆ.
ಮಾರುಕಟ್ಟೆಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದ ನಿಂಬೆಹಣ್ಣು ಆವಕ ಹೆಚ್ಚಾಗಿದ್ದು, ಬೆಲೆ ಇಳಿಕೆಯಾಗಿದೆ. ಒಂದು ಚೀಲಕ್ಕೆ (1200 ನಿಂಬೆಹಣ್ಣು) ₹300 ರಿಂದ ಒಂದು ಸಾವಿರದವರೆಗೆ ಬೆಲೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ತಿಂಗಳ ಹಿಂದೆ ₹ 10ಕ್ಕೆ ಕೇವಲ ಮೂರರಿಂದ ನಾಲ್ಕು ನಿಂಬೆಹಣ್ಣು ಸಿಗುತ್ತಿತ್ತು. ಈಗ ಬರೋಬ್ಬರಿ ಡಜನ್ ನಿಂಬೆಹಣ್ಣು ಗ್ರಾಹಕರಿಗೆ ಸಿಗುತ್ತಿವೆ.
‘ಈ ಬಾರಿ ಮಳೆ ಹೆಚ್ಚಾಗಿರುವುದರಿಂದ ಬೆಳೆಯೂ ಚೆನ್ನಾಗಿ ಬಂದಿದೆ. ಮಾರುಕಟ್ಟೆಗೆ ನಿಂಬೆಹಣ್ಣಿನ ಪೂರೈಕೆ ಹೆಚ್ಚಾಗಿದೆ. ಇದು ಹೀಗೆ ಮುಂದುವರಿದರೆ ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಬಿಸಿಲು ಹೆಚ್ಚಾದರೆ ಅದಕ್ಕೆ ಬೇಡಿಕೆ ಹಾಗೂ ಬೆಲೆ ಎರಡೂ ಇರುತ್ತದೆ’ ಎಂದು ವ್ಯಾಪಾರಿ ಅಬ್ದುಲ್ ತಿಳಿಸಿದರು.
ಚಿಲ್ಲರೆ ವ್ಯಾಪಾರಿಗಳು ₹10ಕ್ಕೆ ಹತ್ತರಿಂದ ಹನ್ನೆರಡುನಿಂಬೆಹಣ್ಣು ಮಾರುತ್ತಿದ್ದಾರೆ.ಗ್ರಾಹಕರು ಮನೆಯಲ್ಲಿ ಉಪ್ಪಿನಕಾಯಿ ಇನ್ನಿತರ ಪದಾರ್ಥಗಳ ತಯಾರಿಕೆಗೆ ಖರೀದಿ ಮಾಡುತ್ತಿದ್ದಾರೆ. ಬಿಸಿಲು ಹೆಚ್ಚಾದರೆ ಜ್ಯೂಸ್ ಸೆಂಟರ್ಗಳಿಂದ ಮತ್ತಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದು ಅವರು ವಿವರಿಸಿದರು.
‘ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು, ದ್ರಾಕ್ಷಿ ಹಾಗೂ ಸಪೋಟ (ಚಿಕ್ಕು) ಹಣ್ಣಿನ ಬೆಲೆ ಸ್ಥಿರವಾಗಿದೆ. ಇನ್ನುಳಿದಂತೆ ದಾಳಿಂಬೆ ₹100, ಕಿತ್ತಳೆ ₹100, ಮೂಸಂಬಿ ₹100, ಸ್ಟ್ರಾಬೆರಿ ಬಾಕ್ಸ್ಗೆ ₹100, ಕಿವಿ ಹಣ್ಣು ಬಾಕ್ಸ್ಗೆ ₹80 ರಂತೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿ ಮೆಹಬೂಬಲಿ ತಿಳಿಸಿದರು.
ಉಳ್ಳಾಗಡ್ಡಿ ದರ ಇಳಿಕೆ
ಹಿಂದಿನ ವಾರ ಮಾರುಕಟ್ಟೆಯಲ್ಲಿ ₹ 40 ರಿಂದ ₹ 80ರವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಈ ವಾರ ₹20 ರಿಂದ ₹80ರಂತೆ ಮಾರಾಟವಾಗುತ್ತಿದೆ. ಈರುಳ್ಳಿಯು ಗಾತ್ರ ಹಾಗೂ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಇದೆ. ಮುಂದಿನ ದಿನದಲ್ಲಿ ಬೆಳೆ ಆವಕವಾದರೆ ಬೆಲೆ ಇಳಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿ ಇಸ್ಮಾಯಿಲ್.
ಈ ವಾರ ಮಾರುಕಟ್ಟೆಯಲ್ಲಿ ಕೆ.ಜಿ.ಟೊಮೆಟೊ ₹10, ಸೌತೆಕಾಯಿ ₹40, ಬದನೆಕಾಯಿ (ಮುಳಗಾಯಿ) ಮತ್ತು ಮೆಣಸಿನಕಾಯಿ ₹30, ಬೀನ್ಸ್ ₹50, ಚವಳಿಕಾಯಿ ₹50, ಹೀರೇಕಾಯಿ, ಹಾಗಲಕಾಯಿ, ಡೊಣ್ಣ ಮೆಣಸು₹50 ಇದೆ. ಅಲ್ಲದೆ, ಕ್ಯಾರೆಟ್ ₹40, ಬೀಟ್ರೂಟ್ ₹40, ಕ್ಯಾಬೆಜ್ ₹30, ಹೂಕೋಸು ₹ 30 ರಂತೆ ಮಾರಾಟವಾಗುತ್ತಿದೆ’ ಎಂದು ವ್ಯಾಪಾರಿ ತೌಸಿಫ್ ಕೋಣನತಂಬಗಿ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.