ಸಾವು
(ಪ್ರಾತಿನಿಧಿಕ ಚಿತ್ರ)
ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮದಗ ಮಾಸೂರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಶಫೀವುಲ್ಲಾ (38) ಎಂಬುವವರ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಮೃತನ ಪತ್ನಿ ಹಾಗೂ ಅವರ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
‘ಹರಿಹರ ನಿವಾಸಿ ಶಫೀವುಲ್ಲಾ, ಗೌಂಡಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಹಲಗೇರಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೆರೆಯಲ್ಲಿ ಜುಲೈ 27ರಂದು ಶಫೀವುಲ್ಲಾ ಮೃತದೇಹ ಪತ್ತೆಯಾದಾಗ, ಮೈ ಮೇಲೆ ಗಾಯದ ಗುರುತುಗಳಿದ್ದವು. ಮರಣೋತ್ತರ ಪರೀಕ್ಷೆ ನಡೆಸಿದಾಗ, ಕೊಲೆ ಎಂಬುದು ಕಂಡುಬಂತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಪತಿ ಕಾಣೆಯಾದ ಬಗ್ಗೆ ಪತ್ನಿ, ಹಲಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಅನುಮಾನ ಬಂದಿತ್ತು. ಕೆಲ ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಿದಾಗ, ಕೊಲೆಯಲ್ಲಿ ಪತ್ನಿ ಹಾಗೂ ಆಕೆಯ ಸ್ನೇಹಿತರ ಪಾತ್ರವಿರುವುದು ತಿಳಿಯಿತು. ಈಗ ಇಬ್ಬರನ್ನೂ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ತಿಳಿಸಿದರು.
ಪತ್ನಿ–ಸ್ನೇಹಿತನ ನಡುವೆ ಸಲುಗೆ: ‘ಮೃತ ಶಫೀವುಲ್ಲಾ ಅವರು ಹರಿಹರದಲ್ಲಿ ನೆಲೆಸಿದ್ದರು. ಅವರ ಪತ್ನಿ, ಹಲಗೇರಿಯಲ್ಲಿರುವ 21 ವರ್ಷದ ಯುವಕನ ಜೊತೆ ಸಲುಗೆ ಇಟ್ಟುಕೊಂಡಿದ್ದರು. ಆಗಾಗ ಭೇಟಿಯಾಗುತ್ತಿದ್ದರು. ಯುವಕನದ್ದೇ ಬಾಡಿಗೆ ಮನೆಯಿತ್ತು. ಹಲಗೇರಿಗೆ ಹೋಗೋಣವೆಂದು ಹೇಳಿದ್ದ ಪತ್ನಿ, ಶಫೀವುಲ್ಲಾ ಹಾಗೂ ಮಕ್ಕಳ ಸಮೇತ ಯುವಕನ ಮನೆಗೆ ಬಂದಿದ್ದರು. ಅಲ್ಲಿಯೇ ಬಾಡಿಗೆಗಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
‘ಪತಿಯನ್ನು ಸ್ನೇಹಿತ ಪರಿಚಯ ಮಾಡಿಕೊಂಡಿದ್ದ. ಪತಿ ಮನೆಯಲ್ಲಿರದ ಸಂದರ್ಭದಲ್ಲಿ ಸ್ನೇಹಿತ ಬಂದು ಹೋಗುತ್ತಿದ್ದ. ಆದರೆ, ಇತ್ತೀಚಿನ ದಿನಗಳಲ್ಲಿ ಶಫೀವುಲ್ಲಾ ಹೆಚ್ಚಾಗಿ ಮನೆಯಲ್ಲಿರುತ್ತಿದ್ದರು. ಇದರಿಂದ ಸ್ನೇಹಿತ ಹಾಗೂ ಪತ್ನಿಗೆ, ಪರಸ್ಪರ ಸೇರಲು ಅವಕಾಶ ಸಿಕ್ಕಿರಲಿಲ್ಲ. ಇಬ್ಬರು ಸೇರಿ ಶಫೀವುಲ್ಲಾ ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದರು.
ಮದ್ಯ ಕುಡಿಸಿ ಹತ್ಯೆ: ‘ಜುಲೈ 25ರಂದು ಶಫೀವುಲ್ಲಾ ಬಳಿ ಹೋಗಿದ್ದ ಪತ್ನಿಯ ಸ್ನೇಹಿತ, ಮದ್ಯ ಕುಡಿಯೋಣವೆಂದು ಹೇಳಿ ಬೈಕ್ನಲ್ಲಿ ಕರೆದುಕೊಂಡು ಬಂದಿದ್ದ. ಇಬ್ಬರೂ ಸೇರಿ ಮದ್ಯ ಕುಡಿದಿದ್ದರು. ಆದರೆ, ಆರೋಪಿಯು ಶಫೀವುಲ್ಲಾಗೆ ಹೆಚ್ಚು ಕುಡಿಸಿದ್ದ. ಸಂಜೆ 6 ಗಂಟೆಯ ಸುಮಾರಿಗೆ ಇಬ್ಬರೂ ಮದಗ ಮಾಸೂರು ಕೆರೆಗೆ ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೆರೆಯ ದಡದಲ್ಲಿ ನಿಂತಿದ್ದ ಪತ್ನಿಯ ಸ್ನೇಹಿತ, ಶಫೀವುಲ್ಲಾ ಕೈಗೆ ಮೊಬೈಲ್ ಕೊಟ್ಟು ತನ್ನ ಫೋಟೊ ತೆಗೆಸಿಕೊಂಡಿದ್ದ. ಬಳಿಕ, ಫೋಟೊ ತೆಗೆಯುವುದಾಗಿ ಹೇಳಿ ಮದ್ಯದ ಅಮಲಿನಲ್ಲಿದ್ದ ಶಫೀವುಲ್ಲಾ ಅವರನ್ನು ದಡದ ಮೇಲೆ ನಿಲ್ಲಿಸಿದ್ದ. ಫೋಟೊ ತೆಗೆಯುವ ನೆಪದಲ್ಲಿ ಶಫೀವುಲ್ಲಾ ಅವರನ್ನು ಕೆರೆಯೊಳಗೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದ’ ಎಂದು ಮೂಲಗಳು ತಿಳಿಸಿವೆ.
‘ಕೆರೆಯಲ್ಲಿ ಬೀಳುತ್ತಿದ್ದಂತೆ ಶಫೀವುಲ್ಲಾ ಅವರ ದೇಹಕ್ಕೆ ಕಲ್ಲುಗಳು ತಾಗಿ ರಕ್ತ ಬಂದಿತ್ತು. ತೀವ್ರ ಗಾಯಗೊಂಡು ಅವರು ಕೆರೆಯಲ್ಲಿ ಮೃತಪಟ್ಟಿದ್ದರು. ಜುಲೈ 26ರಂದು ಮೃತದೇಹ ಕಂಡಿತ್ತು. ಅಪಾಯಕಾರಿ ಸ್ಥಿತಿಯಲ್ಲಿದ್ದ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ಜುಲೈ 27ರಂದು ಮೃತದೇಹ ಹೊರಗೆ ತೆಗೆದರು’ ಎಂದು ಹೇಳಿವೆ.
‘ಶಫೀವುಲ್ಲಾರನ್ನು ಕೊಂದರೆ ನನ್ನನ್ನು ಮದುವೆಯಾಗುವುದಾಗಿ ಅವರ ಪತ್ನಿ ಹೇಳಿದ್ದರು. ಹೀಗಾಗಿ, ಕೊಲೆ ಮಾಡಿದ್ದಾಗಿ ಸ್ನೇಹಿತ ಹೇಳುತ್ತಿದ್ದಾನೆ. ಈ ಹೇಳಿಕೆಯನ್ನು ಪತ್ನಿ ತಳ್ಳಿ ಹಾಕುತ್ತಿದ್ದಾರೆ. ಆದರೆ, ಪುರಾವೆಗಳ ಮೂಲಕ ಕೊಲೆಯಲ್ಲಿ ಇಬ್ಬರೂ ಶಾಮೀಲಾಗಿರುವುದು ಕಂಡುಬರುತ್ತಿದೆ. ಈ ಪ್ರಕರಣ, ರಾಯಚೂರಿನಲ್ಲಿ ಫೋಟೊ ತೆಗೆಯುವುದಾಗಿ ಹೇಳಿ ಪತಿಯನ್ನು ಮೇಲ್ಸೇತುವೆ ಮೇಲೆ ನಿಲ್ಲಿಸಿ ಪತ್ನಿಯೇ ತಳ್ಳಿದ ಘಟನೆಯನ್ನು ನೆನಪಿಸುವಂತಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.