
ಮಂಜುನಾಥ ಅಣ್ಣಪ್ಪ ಚಿಲೋಜಿ
ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚನ್ನಳ್ಳಿ–ವರಹ ರಸ್ತೆಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕುರಿಗಾಹಿ ಮಂಜುನಾಥ ಅಣ್ಣಪ್ಪ ಚಿಲೋಜಿ (26) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
‘ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಮಂಜುನಾಥ್, ಕುರಿ ಕಾಯುತ್ತ ಬದುಕು ಕಟ್ಟಿಕೊಂಡಿದ್ದ. ಗುರುವಾರ ರಾತ್ರಿ ಮೊಬೈಲ್ನಲ್ಲಿ ವಿಡಿಯೊ ಚಿತ್ರೀಕರಿಸಿದ್ದ ಅವರು, ‘ನನ್ನ ಸಾವಿಗೆ ಪತ್ನಿ, ಆಕೆಯ ತಂದೆ–ತಾಯಿ, ಮಾವ, ಆತನ ಪರಿಚಯಸ್ಥ ಕಾರಣ’ ಎಂದು ಆರೋಪಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹಿರೇಕೆರೂರು ಠಾಣೆ ಪೊಲೀಸರು ಹೇಳಿದರು.
‘ಮಂಜುನಾಥ ಆತ್ಮಹತ್ಯೆ ಬಗ್ಗೆ ಅವರ ಸಹೋದರಿ ದೂರು ನೀಡಿದ್ದಾರೆ. ಮಂಜುನಾಥನ ಪತ್ನಿ ರೇಖಾ, ಮಾವ ಬೀರಪ್ಪ ಕಾವಲಪುರೆ, ಅತ್ತೆ ಸತ್ಯವ್ವ, ಸಂಬಂಧಿಕರಾದ ಹೊನ್ನಸಿದ್ದಪ್ಪ ಬನ್ನೆ ಹಾಗೂ ರಾಜಪ್ಪ ಉರುಪ್ ರಾಯಪ್ಪ ನಿಂಗಪ್ಪ ಬಗಡ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಎರಡು ವರ್ಷದ ಹಿಂದಷ್ಟೇ ಮದುವೆ: ‘ಮಂಜುನಾಥ್ ಅವರು ಎರಡು ವರ್ಷಗಳ ಹಿಂದೆಯಷ್ಟೇ ಸಂಬಂಧಿಯೂ ಆಗಿದ್ದ ರೇಖಾ ಅವರನ್ನು ಮದುವೆಯಾಗಿದ್ದರು. ಆದರೆ, ಮಂಜುನಾಥ್ ಜೊತೆ ಪತ್ನಿ ಪದೇ ಪದೇ ಜಗಳ ಮಾಡಲಾರಂಭಿಸಿದ್ದರು. ಆಗಾಗ ತವರು ಮನೆಗೂ ಹೋಗಿದ್ದರು. ಐದಾರು ಬಾರಿ ಪಂಚರನ್ನು ಸೇರಿಸಿ, ಪಂಚಾಯಿತಿ ಮಾಡಲಾಗಿತ್ತು. ಅಷ್ಟಾದರೂ ಸಂಸಾರ ಸುಧಾರಣೆಯಾಗಿರಲಿಲ್ಲವೆಂದು ದೂರುದಾರರು ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಮಂಜುನಾಥ ಅವರು ಪತ್ನಿಗೆ ಯಾವುದೇ ಕಿರುಕುಳ ನೀಡಿರಲಿಲ್ಲ. ಅಷ್ಟಾದರೂ ಪತ್ನಿ, ಮಂಜುನಾಥ್ ವಿರುದ್ಧ ಠಾಣೆಗೆ ದೂರು ನೀಡಿದ್ದರು. ಪತ್ನಿ ಠಾಣೆ ಮೆಟ್ಟಿಲೇರಿದ್ದರಿಂದ ಮಾನಸಿಕವಾಗಿ ನೊಂದ ಮಂಜುನಾಥ, ತನ್ನ ಮೊಬೈಲ್ನಲ್ಲಿ ವಿಡಿಯೊ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.