
ಹಾವೇರಿ: ಜನರಲ್ಲಿ ಓದಿನ ಹವ್ಯಾಸ ಹೆಚ್ಚಿಸುವ ಹಾಗೂ ಪುಸ್ತಕಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ ‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ನಗರದ ಎರಡು ಕಡೆಗಳಲ್ಲಿ ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತು.
ನಾಗೇಂದ್ರಮಟ್ಟಿ ಬಳಿಯ ಶಾಂತಿನಗರದಲ್ಲಿರುವ ಸುಡುಗಾಡು ಸಿದ್ಧರ ಕಾಲೊನಿಯಲ್ಲಿರುವ ಗುಡಿಸಲಿನಲ್ಲಿ ಒಂದು ಗ್ರಂಥಾಲಯ ಆರಂಭವಾಗಿದ್ದು ವಿಶೇಷವಾಗಿತ್ತು. ಮಂಜುನಾಥ ನಗರದಲ್ಲಿರುವ ವೈ.ಬಿ. ಆಲದಕಟ್ಟಿ ಅವರ ಮನೆಯಲ್ಲಿ ಎರಡನೇ ಗ್ರಂಥಾಲಯ ಶುರುವಾಯಿತು.
ಹೆಸ್ಕಾಂ ನಿವೃತ್ತ ಅಧಿಕಾರಿ ವಿಜಯಕುಮಾರ ಮುದಕಣ್ಣನವರ ಅವರು ಗುಡಿಸಲಿಗೆ ತೆರಳಿ ಗ್ರಂಥಾಲಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಜೋಪುಡಿಗಳಲ್ಲಿ ಅರಿವು ಹುಟ್ಟಬೇಕಾದರೆ, ಅದು ಅಕ್ಷರ ಮತ್ತು ಪುಸ್ತಕಗಳಿಂದ ಮಾತ್ರ ಸಾಧ್ಯ. ಎಂದೂ ಪುಸ್ತಕ ನೋಡದ, ಪುಸ್ತಕ ಮುಟ್ಟದ ಜನಗಳ ಹತ್ತಿರ ಗ್ರಂಥಾಲಯ ಬರುವುದು ಒಂದು ಬದಲಾವಣೆಯ ಸಂಕೇತ’ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ‘ಸುಡುಗಾಡು ಸಿದ್ಧರಿಗಾಗಿ ಪುಸ್ತಕ ಪ್ರಾಧಿಕಾರದ ಗ್ರಂಥಾಲಯವನ್ನು ಗುಡಿಸಲಿನಲ್ಲಿ ಆರಂಭಿಸಿದ್ದು ಅತ್ಯಂತ ಕ್ರಾಂತಿಕಾರಿಕ ಹೆಜ್ಜೆ’ ಎಂದರು.
ಸತೀಶ ಕುಲಕರ್ಣಿ, ಎಸ್.ಆರ್. ಹಿರೇಮಠ, ಶೆಟ್ಟಿ ವಿಭೂತಿ, ಬಸವರಾಜ ಪೂಜಾರ, ಪರಿಮಳಾ ಜೈನ್, ರೇಣುಕಾ ಗುಡಿಮನಿ, ಶೇಖಪ್ಪ ಮಠಪತಿ, ಕವಿತಾ ಮುದಕಣ್ಣನವರ, ಉಡಚಪ್ಪ ಮಾಳಗಿಮನಿ, ಅಂಬಿಕಾ ಹಂಚಾಟೆ, ರೇಣುಕಾ ಯಲ್ಲಪ್ಪ ಆಲದಕಟ್ಟಿ, ಜುಬೇದಾ ನಾಯಕ್, ಈರಣ್ಣ, ಪೃಥ್ವಿರಾಜ ಬೆಟಗೇರಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.