
ಎಫ್ಐಆರ್
ಹಾವೇರಿ: ‘ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಸವಣೂರಿನ ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ಜಗದೀಶ್ ಅವರನ್ನು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಶಿಕ್ಷಕನಿಗೆ ಅಪಮಾನ ಮಾಡಿ ಜೀವಬೆದರಿಕೆಯೊಡ್ಡಿರುವ ಆರೋಪದಡಿ 22 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
‘ಡಿ. 10ರಂದು ನಡೆದಿದ್ದ ಘಟನೆಯನ್ನು ಉಲ್ಲೇಖಿಸಿ ಉರ್ದು ಶಾಲೆಯ ಮುಖ್ಯಶಿಕ್ಷಕ ರಾಜೇಸಾಬ ಖುದಾನಸಾಬ ಸಂಕನೂರ ಅವರು ಸವಣೂರು ಠಾಣೆಗೆ ದೂರು ನೀಡಿದ್ದರು. ಅದರನ್ವಯ ಶಿಕ್ಷಕ ಜಗದೀಶ್ ವಗ್ಗಣ್ಣನವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ, ಶಿಕ್ಷಕ ಜಗದೀಶ್ ಸಹ ದೂರು ನೀಡಿದ್ದಾರೆ. ಅದರನ್ವಯ 22 ಮಂದಿ ಹಾಗೂ ಇತರರ ವಿರುದ್ಧ ಸವಣೂರು ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಶಾಲೆಯಲ್ಲಿ ಶಿಕ್ಷಕನನ್ನು ಥಳಿಸಿದ್ದವರು, ಚಪ್ಪಲಿಯಿಂದ ಹೊಡೆದಿದ್ದವರು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದವರನ್ನು ವಿಡಿಯೊ ಆಧರಿಸಿ ಪತ್ತೆ ಮಾಡಲಾಗಿದೆ. ಅದರನ್ವಯ 22 ಮಂದಿಯನ್ನು ಆರೋಪಿಯನ್ನಾಗಿ ಮಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದರು.
‘ಸವಣೂರಿನ ನಿವಾಸಿಗಳಾದ ಸಾದಿಕ್ ಮನಿಯಾರ್, ಜಿಶನ್ ನಾಗದ, ಅಬ್ದುಲಗನಿ ಪರಾಸ್, ಫಾಜಿಲ್ಅಹ್ಮದ್ ಮನಿಯಾರ್, ಅತ್ತಾವುಲ್ಲ ಖಾನ್ ಭಕ್ಷಿ, ಸುಲೇದ್ ಮನಿಯಾರ್, ಮೋಷಿನ್ ಖತೀಬ್, ಆಸಿಫ್ ದುಖಂದರ್, ಇಮ್ರಾನ್ ಖಾಂಜಾಡೆ, ಮಹಮ್ಮದ್ ಅಸಂ ತೆಲಾರ್, ಅಮಿರ್ಖಾನ್ ಗುತ್ತಲ, ಅಹ್ಮದ್ಖಾನ್ ಖಾಂಜಾಡೆ, ಅಲ್ಲಾಭಕ್ಷ್ ಚೋಪದಾರ್, ದಾದಾಪೀರ ಮೊಹಮ್ಮದ್ಅಸೀಮ್ ಕಿಲ್ಲೇದಾರ, ಅಶೋಕ ಮನ್ನಂಗಿ, ಮಹಮ್ಮದ್ರಫೀಕ್ ಚುಡಿಗಾರ, ಆಸಿಫ್ಅಹ್ಮದ್ ದುಖಾಂದಾರ್, ಅಲ್ತಾಫ್ ಮಕಾಂನದಾರ, ಮಹಮ್ಮದ್ ಹಷತ್ ಕಿಲ್ಲೇದಾರ, ಮಹಮ್ಮದ್ ಸಾದಿಕ್ ಚೋಪದಾರ್, ದಾದಾಪೀರ ತಂಬುಳಿ, ಮಹಮ್ಮದ್ಹನೀಫ್ ದುಖಾಂದಾರ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ’ ಎಂದು ತಿಳಿಸಿದರು.
‘ವಿದ್ಯಾರ್ಥಿನಿಯವರಿಗೆ ಶಿಕ್ಷಕ ಜಗದೀಶ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಆರೋಪವಿರುವುದಾಗಿ ಮುಖ್ಯಶಿಕ್ಷಕ ದೂರಿದ್ದಾರೆ. ಆದರೆ, ಆರೋಪ ಸುಳ್ಳು ಎಂದು ಶಿಕ್ಷಕ ದೂರಿನಲ್ಲಿ ತಿಳಿಸಿದ್ದಾರೆ. ಎರಡೂ ದೂರಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ತನಿಖೆಯಿಂದಲೇ ನಿಜಾಂಶ ತಿಳಿಯಬೇಕಿದೆ’ ಎಂದು ಹೇಳಿದರು.
‘ಸವಣೂರಿನ ಸರ್ಕಾರಿ ಉರ್ದು ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಡಿ. 10ರಂದು ಬೆಳಿಗ್ಗೆ 11.30 ಗಂಟೆಯಿಂದ 1 ಗಂಟೆಯ ಅವಧಿಯಲ್ಲಿ ಗುಂಪು ಕಟ್ಟಿಕೊಂಡು ಶಾಲೆಗೆ ಬಂದಿದ್ದ ಆರೋಪಿಗಳು, ಶಾಲೆಯ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದಿಯಾ ? ಎಂದು ಸುಳ್ಳು ಆರೋಪ ಮಾಡಿ ಹಲ್ಲೆ ಮಾಡಿದರು’ ಎಂದು ಶಿಕ್ಷಕ ಜಗದೀಶ್ ದೂರಿನಲ್ಲಿ ತಿಳಿಸಿದ್ದಾರೆ.
‘ಕಬ್ಬಿಣದ ರಾಡ್ನಿಂದಲೇ ಹೊಡೆದಿರುವ ಆರೋಪಿಗಳು, ಕೊಲೆಗೂ ಯತ್ನಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ನಂತರ, ಆರೋಪಿಗಳೆಲ್ಲರೂ ನನ್ನನ್ನು ಶಾಲೆಯಿಂದ ಹೊರಗಡೆ ಎಳೆದುಕೊಂಡು ಬಂದು ಚಪ್ಪಲಿಯಿಂದ ಹೊಡೆದರು. ನಂತರ, ಕೊರಳಿಗೆ ಚಪ್ಪಲಿ ಹಾರ ಹಾಕಿ ಸವಣೂರಿನ ಹಲವು ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಅಪಮಾನ ಮಾಡಿದ್ದಾರೆ. ಜೊತೆಗೆ, ಶಾಲೆಯಲ್ಲಿ ಹೇಗೆ ನೌಕರ ಮಾಡುತ್ತಿಯಾ ನೋಡುತ್ತೇವೆ ಎಂದು ಹೇಳಿ ಜೀವ ಬೆದರಿಕೆಯೊಡ್ಡಿದ್ದಾರೆ. ಎಲ್ಲ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.