ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದ ಸಮೀಪ ತುಂಗಭದ್ರಾ ನದಿಯಲ್ಲಿ ಭಾನುವಾರ ಮೀನು ಹಿಡಿಯಲು ಹೋದ ಇಬ್ಬರು ನೀರುಪಾಲಾಗಿದ್ದಾರೆ.
ಹಾವೇರಿ ತಾಲ್ಲೂಕಿನ ಗುತ್ತಲ ಪಟ್ಟಣದ ಫಕ್ಕಿರೇಶ ಹೊನ್ನಪ್ಪ ಮಣ್ಣೂರ (23) ಮತ್ತು ಯಲ್ಲಪ್ಪ ಫಕ್ಕೀರಪ್ಪ ಕುಂಬಾರ (34) ನೀರುಪಾಲಾದವರು.
ನದಿಯಲ್ಲಿ ಸ್ವಲ್ಪ ಮೀನುಗಳನ್ನು ಹಿಡಿದು, ದಂಡೆಗೆ ತಂದು ಸುರಿದಿದ್ದಾರೆ. ನಂತರ ಸ್ನಾನ ಮಾಡಲು ನದಿಗೆ ಇಳಿದ ಸಂದರ್ಭ ಒಬ್ಬ ಯುವಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ಯುವಕ ಕೂಡ ನೀರು ಪಾಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕರ ಪತ್ತೆಗಾಗಿ ಸ್ಥಳೀಯರು ಮತ್ತು ಮುಳುಗು ತಜ್ಞರ ನೆರವಿನೊಂದಿಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದುವರೆಗೂ ಯುವಕರ ಬಗ್ಗೆ ಸುಳಿವು ಸಿಕ್ಕಿಲ್ಲ.
ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ನದಿ ತೀರದಲ್ಲಿ ಆಳವಾದ ಗುಂಡಿಗಳು ಸೃಷ್ಟಿಯಾಗಿವೆ. ನೀರಿನ ಆಳದ ಬಗ್ಗೆ ಸ್ಪಷ್ಟ ಅರಿವಿಲ್ಲದ ಯುವಕರು ನೀರಿಗಿಳಿದು ಜೀವ ತೆತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಲ್ಲಿ ಪೊಲೀಸರು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.