ADVERTISEMENT

ಮಕ್ಕಳ ಚಿಕಿತ್ಸೆಗಾಗಿ ವಿಶೇಷ ತಜ್ಞವೈದ್ಯರನ್ನು ಆಹ್ವಾನಿಸಿ: ಮೊಹಮ್ಮದ್‌ ರೋಶನ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 16:05 IST
Last Updated 30 ಜುಲೈ 2021, 16:05 IST
ಮೊಹಮ್ಮದ್‌ ರೋಶನ್‌, ಸಿಇಒ, ಹಾವೇರಿ ಜಿಲ್ಲಾ ಪಂಚಾಯಿತಿ
ಮೊಹಮ್ಮದ್‌ ರೋಶನ್‌, ಸಿಇಒ, ಹಾವೇರಿ ಜಿಲ್ಲಾ ಪಂಚಾಯಿತಿ   

ಹಾವೇರಿ: ‘ವಾತ್ಸಲ್ಯ’ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಕಂಡು ಬಂದ ವಿವಿಧ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ಮಕ್ಕಳ ಚಿಕಿತ್ಸೆಗಾಗಿ ವಿಶೇಷ ತಜ್ಞವೈದ್ಯರನ್ನು ಆಹ್ವಾನಿಸಿ ವಿಶೇಷ ಆರೋಗ್ಯ ಶಿಬಿರ ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ‘ವಾತ್ಸಲ್ಯ’ ಆರೋಗ್ಯ ತಪಾಸಣೆ ಶಿಬಿರದ ಪ್ರಗತಿ ಪರಿಶೀಲನೆ ನಡೆಸಿದ ಅವರು, ಗಂಭೀರ ಆರೋಗ್ಯ ಎದುರಿಸುತ್ತಿರುವ ಮಕ್ಕಳಿಗೆ ‘ಆಯುಷ್ಮಾನ ಭಾರತ್‌– ಆರೋಗ್ಯ ಕರ್ನಾಟಕ’ ವಿಮಾ ಯೋಜನೆಯಡಿ ವೈದ್ಯಕೀಯ ವೆಚ್ಚ ಹಾಗೂ ಪ್ರಯಾಣ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಬಿಪಿಎಲ್ ಚೀಟಿಯಲ್ಲಿ ಮಕ್ಕಳ ಹೆಸರು ಸೇರ್ಪಡೆಯಾಗಬೇಕು. ಪಡಿತರ ಚೀಟಿಗಳಲ್ಲಿಮಕ್ಕಳ ಹೆಸರಿಲ್ಲದಿದ್ದರೆ, ತಕ್ಷಣ ಅವರ ಹೆಸರನ್ನು ಎಪಿಎಲ್ ಕಾರ್ಡ್‌ಗಳಲ್ಲಿ ನೋಂದಾಯಿಸಲು ಕ್ರಮವಹಿಸಬೇಕು. ಈ ಕುರಿತಂತೆ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆಯ ಉಪನಿರ್ದೇಶಕರನ್ನು ಸಂಪರ್ಕಿಸಿ ಕ್ರಮವಹಿಸುವಂತೆ ಸೂಚನೆ ನೀಡಿದರು.

ADVERTISEMENT

ಶೇ 90ರಷ್ಟು ಸಾಧನೆ: ಅಂಗನವಾಡಿ ಹಾಗೂ ಶಾಲಾ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಶೇ 90ರಷ್ಟು ಸಾಧನೆಯಾಗಿದೆ. ಶೇ 98.78ರಷ್ಟು ಅಂಗನವಾಡಿ ಶಾಲೆಗಳಿಗೆ ಭೇಟಿ ನೀಡಲಾಗಿದೆ. ಜಿಲ್ಲೆಯಲ್ಲಿ 1,918 ಅಂಗನವಾಡಿ ಮತ್ತು 1,878 ಸರ್ಕಾರಿ ಶಾಲೆಗಳ 4,07,370 ಮಕ್ಕಳ ಪೈಕಿ ಈವರೆಗೆ 3,59,158 ಮಕ್ಕಳ ತಪಾಸಣೆ ನಡೆಸಲಾಗಿದೆ ಎಂದು ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ ಮಾಹಿತಿ ನೀಡಿದರು.

ನಿರೀಕ್ಷೆಯಂತೆ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಉತ್ತಮ ಸಾಧನೆ ಮಾಡಿದ ವೈದ್ಯಾಧಿಕಾರಿಗಳನ್ನು ಸಿಇಒ ಅವರು ಸಭೆಯಲ್ಲಿ ಅಭಿನಂದಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಡಾ.ನೀಲೇಶ ಸೇರಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳು, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.