ADVERTISEMENT

ರಾಣೆಬೆನ್ನೂರು: ಮಳೆ ತಂದ ಸಂಕಷ್ಟ, ಕೊಳೆಯುತ್ತಿದೆ ಗೂಡು ಹಾಕಿದ ಈರುಳ್ಳಿ

ಬೆಳೆಗಾರರಿಗೆ ನಷ್ಟದ ಭೀತಿ

ಮುಕ್ತೇಶ ಕೂರಗುಂದಮಠ
Published 21 ಸೆಪ್ಟೆಂಬರ್ 2020, 1:34 IST
Last Updated 21 ಸೆಪ್ಟೆಂಬರ್ 2020, 1:34 IST
ರಾಣೆಬೆನ್ನೂರು ತಾಲ್ಲೂಕಿನ ಕೆರಿಮಲ್ಲಾಪುರ ಗ್ರಾಮದಲ್ಲಿ ಹಾಲಮ್ಮ ಶಿವಲಿಂಗಣ್ಣನವರ ಜಮೀನಿನಲ್ಲಿ ಅತಿಯಾದ ಮಳೆಗೆ ಈರುಳ್ಳಿ ಸಂಪೂರ್ಣ ನಾಶವಾಗಿದೆ
ರಾಣೆಬೆನ್ನೂರು ತಾಲ್ಲೂಕಿನ ಕೆರಿಮಲ್ಲಾಪುರ ಗ್ರಾಮದಲ್ಲಿ ಹಾಲಮ್ಮ ಶಿವಲಿಂಗಣ್ಣನವರ ಜಮೀನಿನಲ್ಲಿ ಅತಿಯಾದ ಮಳೆಗೆ ಈರುಳ್ಳಿ ಸಂಪೂರ್ಣ ನಾಶವಾಗಿದೆ   

ರಾಣೆಬೆನ್ನೂರು: ಹೊಲದಲ್ಲಿರುವ ಈರುಳ್ಳಿ ಫಸಲು ಹಾಗೂ ಕಿತ್ತು ಗೂಡು ಹಾಕಿರುವ ಈರುಳ್ಳಿ ಸತತ ಮಳೆಯ ಪರಿಣಾಮ ಕೊಳೆಯುತ್ತಿದೆ.

ಕಳೆದ ವರ್ಷ ಅತಿವೃಷ್ಟಿಯಿಂದ ನೀರಿನ ರಭಸಕ್ಕೆ ಈರುಳ್ಳಿ ಕೊಚ್ಚಿಕೊಂಡು ಹೋಗಿತ್ತು. ಈ ವರ್ಷನೂ ಅದೇ ರಾಗ ಅದೇ ಹಾಡು. ಈರುಳ್ಳಿ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ವಾರಗಟ್ಟಲೇ ಮಳೆ ಬಂದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎನ್ನುತ್ತಾರೆ ರೈತರು.

ತಾಲ್ಲೂಕಿನ ಕೆರೆಮಲ್ಲಾಪುರ, ಹೊನ್ನತ್ತಿ, ಯತ್ತಿನಹಳ್ಳಿ, ಕುದರಿಹಾಳ, ಸೋಮಲಾಪುರ, ರಡ್ಡಿಯಲ್ಲಾಪುರ, ಮೈದೂರ, ಗುಡಗೂರ, ಗಂಗಾಪುರ, ಅಂತರವಳ್ಳಿ, ಯರೇಕುಪ್ಪಿ, ಬೆನಕನಕೊಂಡ, ಉಕ್ಕುಂದ ಸರ್ವಂದ, ಅಸುಂಡಿ, ಹುಲಿಹಳ್ಳಿ, ಕಾಕೋಳ, ಕುಪ್ಪೇಲೂರ, ಅಂತರವಳ್ಳಿ, ಆಲದಕಟ್ಟಿ, ಹಲಗೇರಿ, ಇಟಗಿ, ಚಳಗೇರಿ ಗ್ರಾಮ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಾರು ಹಂಗಾಮಿನಲ್ಲಿ ಅಂದಾಜು 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದಾರೆ.

ADVERTISEMENT

ಕೆರಿಮಲ್ಲಾಪುರ ಗ್ರಾಮದ ರೈತ ಮಹಿಳೆ ಹಾಲಮ್ಮ ಶಿವಲಿಂಗಣ್ಣನವರ ಅವರು 2.26 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ಭಾರಿ ಮಳೆಯ ಪರಿಣಾಮ ಗಿಡ ಸರಿಯಾಗಿ ಹುಟ್ಟಲಿಲ್ಲ. ಬಂದಿರುವ ಫಸಲು ಸಹ ತೇವಾಂಶ ಹೆಚ್ಚಾಗಿ ಬೇರು ಸಮೇತ ಕೊಳೆತು ಹೋಗಿದೆ. ಬೀಜ, ಗೊಬ್ಬರ, ಟ್ರಾಕ್ಟರ್ ಬಾಡಿಗೆ, ಕಳೆ, ಕೂಲಿ ಸೇರಿ ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ. ಈ ರೀತಿ ನಷ್ಟವಾದರೆ ಜೀವನ ಮಾಡುವುದು ಹೆಂಗೆ ಎಂದು ಅವರು ಪ್ರಶ್ನಿಸುತ್ತಾರೆ.

ಬಿತ್ತನೆ ಕಾಲದಲ್ಲಿ ಸಕಾಲಕ್ಕೆ ಮುಂಗಾರು ಮಳೆ ಬಿದ್ದಿದ್ದರಿಂದ ಈರುಳ್ಳಿ ಚೆನ್ನಾಗಿ ಬಂದಿದೆ. ಅತಿಯಾದ ಮಳೆಗೆ ತೇವಾಂಶ ಹೆಚ್ಚಾಗಿ ಹುಲ್ಲುತುಂಬಿ ಕೊಂಡಿದ್ದರಿಂದ ಕಳೆನಾಶಕ ಔಷಧ, ರಸಗೊಬ್ಬರ ಹಾಕಿ ಈರುಳ್ಳಿ ಉಳಿಸಿಕೊಂಡಿದ್ದಾರೆ. ಈಗ ಗಡ್ಡಿಯಾಗಿದ್ದಕ್ಕೆ ಕಿತ್ತು ಗೂಡು ಹಾಕಿದರೆ ಮತ್ತೆ ಮಳೆ ಪ್ರಾರಂಭವಾಗಿ ಗೂಡಲ್ಲೆ ಕೊಳೆತು ಗಬ್ಬು ನಾರುತ್ತಿದೆ. ಇದೇ ರೀತಿ ಮುಂದುವರೆದರೆ ಬೆಳೆ ಸರ್ವನಾಶವಾಗಿ ರೈತರು ಜೀವನ ನಡೆಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಹಾಗೂ ಹಾರೊಗೊಪ್ಪ ಗ್ರಾಮದ ರೈತ ಬಸವರಾಜ ಚೌಡಣ್ಣನವರ.

8-10 ದಿನ ನಿರಂತರ ಮಳೆ ಸುರಿದು ಹಸಿ ಹೆಚ್ಚಾಗಿ ಫಸಲಿಗೆ ಬಂದ ಈರುಳ್ಳಿ ಕೊಳೆತ ಸ್ಥಿತಿಯಲ್ಲಿದೆ. ಕಿತ್ತು ಗೂಡು ಹಾಕಿದ ಈರುಳ್ಳಿ ಕೊಳೆತ ಶವದಂತೆ ಆಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಉತ್ತಮ ಬೆಲೆ ಸಿಗುತ್ತಿಲ್ಲ ಎನ್ನುತ್ತಾರೆ ತಾಲ್ಲೂಕಿನ ಬೆನಕನಕೊಂಡ ಗ್ರಾಮದ ಶಿವಕುಮಾರ ಬಲಿಗೇರ.

ಇಳುವರಿ ಚೆನ್ನಾಗಿ ಬಂದಿತ್ತು. ಮಾರುಕಟ್ಟೆಗೆ ಸಾಗಿಸುವಾಗ ಕ್ವಿಂಟಲ್‌ಗೆ ₹ 500 ರಿಂದ ₹ 700 ದರ ಇತ್ತು. ದರ ಕಡಿಮೆ ಎಂಬ ಕಾರಣಕ್ಕೆ ಒಣಗಿಸಲು ಗೂಡು ಹಾಕಿದ್ದೆ, ಈಗ ಮಳೆ ಹೆಚ್ಚಾಗಿ ನೀರು ತುಂಬಿ ಹುಳ ಹತ್ತಿ ಕೊಳೆತಿದೆ ಎನ್ನುತ್ತಾರೆ ರೈತ ಹಲಗೇರಿಯ ಮಹೇಶಪ್ಪ ಕಡೂರ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.