
ಬ್ಯಾಡಗಿ ಪಟ್ಟಣದ ನೆಹರೂ ವೃತ್ತ ಕೇಸರಿ ಬ್ಯಾನರ್ಗಳಿಂದ ಅಲಂಕೃತಗೊಂಡಿರುವುದು.
ಬ್ಯಾಡಗಿ: ಪಟ್ಟಣದ ಎಸ್ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ‘ಭವ್ಯ ಹಿಂದೂ ಸಮಾವೇಶ‘ ಫೆ. 8ರಂದು ಸಂಜೆ 6ಕ್ಕೆ ಜರುಗಲಿದೆ.
ವೇದಿಕೆ ಕಾರ್ಯಕ್ರಮದಲ್ಲಿ ಕುಮಾರೇಶ್ವರ ಧಾರ್ಮಿಕ ಪಾಠ ಶಾಲೆಯ ರಾಚಯ್ಯನವರು ಓದಿಸೋಮಠ, ಮುಪ್ಪಿನೇಶ್ವರ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹಿಂದೂ ಸಮ್ಮೇಳನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಜಯಣ್ಣ ಶಿರೂರ, ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಹಾಗೂ ಇತರರು ಪಾಲ್ಗೊಳ್ಳುವರು. ಮಧ್ಯಾಹ್ನ 2ರಿಂದ ನೆಹರೂ ನಗರದ ದಾನಮ್ಮದೇವಿ ದೇವಸ್ಥಾನದ ಆವರಣದಿಂದ ವಿವಿಧ ಕಲಾ ತಂಡಗಳು ಹಾಗೂ ಮಕ್ಕಳ ವೇಷ ಭೂಷಣಗಳೊಂದಿಗೆ ಭಾರತ ಮಾತೆಯ ಶೋಭಾ ಯಾತ್ರೆ ಆರಂಭವಾಗಲಿದೆ. ಬಳಿಕ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತಾಲ್ಲೂಕು ಕ್ರೀಡಾಂಗಣ ತಲುಪಲಿದೆ ಎಂದು ಹಿಂದೂ ಸಮಾವೇಶದ ತಾಲ್ಲೂಕು ಘಟಕದ ಅಧ್ಯಕ್ಷ ಜಯಣ್ಣ ಶಿರೂರ ತಿಳಿಸಿದರು.
ಶುಕ್ರವಾರ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಪಟ್ಟಣದ ಎಲ್ಲ ರಸ್ತೆಗಳನ್ನು ಕೇಸರಿ ಬಾವುಟಗಳಿಂದ ಅಲಂಕರಿಸಲಾಗಿದ್ದು, ಹಿಂದೂ ಸಮಾವೇಶಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಸ್ಟೇಶನ್ ರಸ್ತೆಯಿಂದ ಅಗಸಹಳ್ಳಿಯವರೆಗೆ ರಸ್ತೆಯುದ್ದಕ್ಕೂ ಕೇಸರಿ ಬ್ಯಾನರ್ಗಳಿಂದ ರಾರಾಜಿಸುತ್ತಿವೆ. ಯುವಕರಲ್ಲಿ ಧರ್ಮ, ದೇಶಭಕ್ತಿ, ಶಿಸ್ತು, ಸೇವಾ ಮನೋಭಾವ ಮತ್ತು ನೈತಿಕ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಹಿಂದೂ ಯುವಕರ ಪಡೆಯನ್ನು ಸಿದ್ಧಪಡಿಸಲಾಗಿದೆ. ಕಳೆದ ಒಂದು ವಾರದಿಂದ ಕ್ರಿಯಾಶೀಲರಾಗಿದ್ದು, ಬ್ಯಾನರ್ಗಳ ಮೂಲಕ ಅಲಂಕರಿಸಲಾಗಿದೆ. ನಮ್ಮ ಸಂಸ್ಕೃತಿಯ ಉಳಿವಿಗಾಗಿ ಸಂಘಟಿತರಾಗಬೇಕಾಗಿದೆ. ಸಮಸ್ತ ಹಿಂದೂ ಸಮಾಜದ ಎಲ್ಲ ಉಪಜಾತಿ ಹಾಗೂ ಪಂಗಡಗಳ ಜನರು ಒಂದೇ ಎನ್ನುವ ಸಂದೇಶವನ್ನು ಈ ಸಮಾವೇಶದಲ್ಲಿ ಬಿಂಬಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.