
ಹಿರೇಕೆರೂರು: ತಾಲ್ಲೂಕಿನ ಮೂರು ಕಡೆಗಳಲ್ಲಿ ಮಾತ್ರ ಆಧಾರ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಜನರು ನೋಂದಣಿ ಹಾಗೂ ತಿದ್ದುಪಡಿ ಮಾಡಲು ಗಂಟೆಗಟ್ಟಲೇ ಸರದಿಯಲ್ಲಿ ಕಾಯಬೇಕಾದ ಸ್ಥಿತಿ ಬಂದೊದಗಿದೆ.
ದಿನದ ಕೂಲಿ ಹಾಗೂ ಸಣ್ಣ–ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರು, ಇಡೀ ದಿನ ಕೇಂದ್ರದಲ್ಲೇ ನಿಲ್ಲುವಂತಾಗಿದೆ. ಇದರಿಂದಾಗಿ, ಅವರ ದಿನದ ಕೂಲಿ ಕೈತಪ್ಪುತ್ತಿದೆ.
ಪಟ್ಟಣದ ತಹಶೀಲ್ದಾರ್ ಕಚೇರಿ ಮತ್ತು ಹಂಸಬಾವಿ ಗ್ರಾಮದ ನಾಡಕಚೇರಿಯಲ್ಲಿ ತೆರೆಯಲಾಗಿದ್ದ ಆಧಾರ್ ಸೇವಾ ಕೇಂದ್ರಗಳನ್ನು ಬಂದ್ ಮಾಡಿ ಹಲವು ವರ್ಷಗಳಾಗಿವೆ.
ಈಗ ಪಟ್ಟಣದ ಅಂಚೆ ಕಚೇರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬಿಎಸ್ಎನ್ಎಲ್ ಕಚೇರಿಗಳಲ್ಲಿ ಮಾತ್ರ ಆಧಾರ್ ಸೇವಾ ಕೇಂದ್ರಗಳಿವೆ. ಇದೇ ಕೇಂದ್ರಗಳಲ್ಲಿ ನೋಂದಣಿ, ನವೀಕರಣ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ತಾಲ್ಲೂಕಿನ ಎಲ್ಲ ಜನರು, ಆಧಾರ್ ಸಂಬಂಧಿತ ಕೆಲಸಗಳಿಗಾಗಿ ಈ ಮೂರು ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಮೂರು ಕೇಂದ್ರಗಳಲ್ಲಿ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದು, ನೋಂದಣಿ ಹಾಗೂ ತಿದ್ದುಪಡಿಗೆ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಕೆಲವರಂತೂ ಮರುದಿನ ಬಂದು ಆಧಾರ್ ಕೆಲಸ ಮಾಡಿಕೊಂಡು ಹೋಗುತ್ತಿರುವುದು ಕಂಡುಬರುತ್ತಿದೆ.
ಬ್ಯಾಂಕ್ ಖಾತೆ, ನೇರ ನಗದು ವರ್ಗಾವಣೆ ಸೇರಿದಂತೆ ಸರ್ಕಾರದ ಪ್ರತಿಯೊಂದು ಯೋಜನೆಯ ಲಾಭ ಪಡೆಯಲು ಆಧಾರ್ ಕಡ್ಡಾಯ ಮಾಡಲಾಗಿದೆ. ಗ್ರಾಮೀಣ ಜನರು ಹೆಚ್ಚಿರುವ ತಾಲ್ಲೂಕಿನಲ್ಲಿ ಹಲವರ ಆಧಾರ್ ಕಾರ್ಡ್ಗಳಲ್ಲಿ ಸಣ್ಣ–ಪುಟ್ಟ ಲೋಪಗಳಿವೆ.
ವಯಸ್ಸು, ಫೋಟೊ, ಬಯೋಮೆಟ್ರಿಕ್... ಹೀಗೆ ನಾನಾ ಸಮಸ್ಯೆಗಳಿವೆ. ಇವುಗಳನ್ನು ನಿವಾರಣೆ ಮಾಡಿಕೊಂಡು ಹೊಸ ಆಧಾರ್ ಕಾರ್ಡ್ ಪಡೆಯಲು ಸೇವಾ ಕೇಂದ್ರಗಳು ಅಗತ್ಯವಿವೆ. ಆದರೆ, ಈ ಕೇಂದ್ರಗಳೇ ಬಂದ್ ಆಗಿರುವುದರಿಂದ ಜನರು ಪರಿತಪಿಸುತ್ತಿದ್ದಾರೆ.
ತಾಲ್ಲೂಕಿನಲ್ಲಿ 19 ಗ್ರಾಮ ಪಂಚಾಯಿತಿ ಒಳಗೊಂಡಂತೆ 67 ಗ್ರಾಮಗಳ ಜನತೆಯು ಪ್ರತಿಯೊಂದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಮಕ್ಕಳ ಶೈಕ್ಷಣಿಕ ದಾಖಲಾತಿಗೆ, ಶಕ್ತಿ ಯೋಜನೆಯಡಿ ಹೆಣ್ಣು ಮಕ್ಕಳು ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಆಧಾರ್ ಕಾರ್ಡ್ ಬೇಕು.
ಸರ್ಕಾರದ ಮನಸ್ವಿನಿ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ ಮಂಜೂರಾತಿ, ಅಂಗವಿಕಲರ ಪ್ರಮಾಣ ಪತ್ರ ಪಡೆಯಲು, ವೈದ್ಯಕೀಯ ಸೌಲಭ್ಯ ಪಡೆಯಲು ಸೇರಿದಂತೆ ಮುಂತಾದ ಸೌಲಭ್ಯಗಳಿಗೆ ಆಧಾರ್ ಕಡ್ಡಾಯವಿದೆ. ಆದರೆ, ಕೇವಲ ಮೂರು ಆಧಾರ್ ಸೇವಾ ಕೇಂದ್ರಗಳು ಇರುವುದರಿಂದ, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತಷ್ಟು ಸೇವಾ ಕೇಂದ್ರಗಳನ್ನು ತೆರೆಯುವಂತೆಯೂ ಒತ್ತಾಯಿಸುತ್ತಿದ್ದಾರೆ.
‘ಒಂದು ದಿನದ ಕೂಲಿ ಬಿಟ್ಟು ಬೆಳಿಗ್ಗೆಯೇ ಬಂದು ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ಆಧಾರ್ ತಿದ್ದುಪಡಿ ಮಾಡಿಸಿಕೊಂಡು ಹೋಗುತ್ತಿದ್ದೇನೆ. ವಿದ್ಯಾರ್ಥಿಗಳು ಶಾಲೆಗೆ ಗೈರಾಗಿ, ಆಧಾರ್ ಕೇಂದ್ರದ ಎದುರು ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲುತ್ತಿದ್ದಾರೆ. ತಾಯಂದಿರು, ಮಕ್ಕಳ ಸಮೇತ ಕಾಯುತ್ತಿದ್ದಾರೆ. ಕೆಲಸದ ಒತ್ತಡದಿಂದಾಗಿ ಕೇಂದ್ರದ ಸಿಬ್ಬಂದಿ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ವರ್ ಹೆಸರಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ನಿವಾಸಿಗಳು ದೂರಿದರು.
‘ಒಂದು ಕೇಂದ್ರದಲ್ಲಿ ದಿನಕ್ಕೆ ಕೇವಲ 20ರಿಂದ 30 ಮಂದಿ ಕೆಲಸ ಮಾತ್ರ ಆಗುತ್ತಿದೆ. ಉಳಿದವರು ಸರದಿಯಲ್ಲಿ ನಿಂತು ವಾಪಸು ಹೋಗುವಂತಾಗಿದೆ. ಕೇಂದ್ರದಿಂದ ಕೇಂದ್ರಕ್ಕೆ ಅಲೆಯುವಂತಾಗಿದೆ. ಹಿರೇಕೆರೂರಿನಲ್ಲಿ ಮತ್ತಷ್ಟು ಸೇವಾ ಕೇಂದ್ರಗಳನ್ನು ತೆರೆಯಬೇಕು. ಪಟ್ಟಣ ಮಾತ್ರವಲ್ಲದೇ ಹೋಬಳಿ ಮಟ್ಟದಲ್ಲೂ ಕೇಂದ್ರ ಆರಂಭಿಸಬೇಕು’ ಎಂದು ಒತ್ತಾಯಿಸಿದರು.
ಆಧಾರ್ ಕೇಂದ್ರದಲ್ಲಿ ನಿತ್ಯವೂ ಜನದಟ್ಟಣೆ ಇರುತ್ತದೆ. ಎಂಟು ತಿಂಗಳ ಮಗುವಿಗೆ ಆಧಾರ್ ಕಾರ್ಡ್ ಮಾಡಿಸಲು ಸರದಿಯಲ್ಲಿ 6 ಗಂಟೆ ನಿಲ್ಲಬೇಕಾಯಿತುಸುಜಾತಾ ಗೃಹಿಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.