ADVERTISEMENT

ನಾರಾಯಣಪುರ ಗ್ರಾಮದ ವಿರಕ್ತಮಠದ ಸಭಾಭವನ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 2:41 IST
Last Updated 7 ನವೆಂಬರ್ 2025, 2:41 IST
ಶಿಗ್ಗಾವಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಗುರುವಾರ ನಡೆದ ವಿರಕ್ತಮಠದ ನೂತನ ಸಭಾಭವನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮುಖಂಡ ವಿಶ್ವನಾಥ ಕಂಬಾಳಿಮಠ ಉದ್ಘಾಟಿಸಿದರು
ಶಿಗ್ಗಾವಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಗುರುವಾರ ನಡೆದ ವಿರಕ್ತಮಠದ ನೂತನ ಸಭಾಭವನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮುಖಂಡ ವಿಶ್ವನಾಥ ಕಂಬಾಳಿಮಠ ಉದ್ಘಾಟಿಸಿದರು   

ಶಿಗ್ಗಾವಿ: ಮನುಷ್ಯ ಸದಾ ಸಂಘ ಜೀವಿಯಾಗಿ, ಇತರರೊಂದಿಗೆ ಒಗ್ಗಟ್ಟಿನ ಮತ್ತು ಸಮಾನತೆ ಬದುಕು ಸಾಗಿಸಲು ಬಯಸುತ್ತಾನೆ. ಅದರಿಂದಾಗಿ ಮೌಲ್ಯಾಧಾರಿತ ಬದುಕಿಗೆ ಪರೋಪಕಾರದ ಗುಣಗಳನ್ನು ಬೆಳಸಿಕೊಳ್ಳುವುದು ಮುಖ್ಯವಾಗಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಿದ್ದರಾಮ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನಾರಾಯಣಪುರ ಗ್ರಾಮದ ಗುರುಲಿಂಗ ಮಹಾಸ್ವಾಮಿ ಅವರ ವಿರಕ್ತಮಠದ ನೂತನ ಸಭಾಭವನ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬದುಕು ಶಾಶ್ವತವಲ್ಲ. ಜನಿಸಿದ ಪ್ರತಿ ಜೀವಿಗೆ ಅಂತ್ಯವಿದೆ. ಹೀಗಾಗಿ ಪ್ರಾಮಾಣಿಕವಾಗಿ ದುಡಿದು ಗಳಿಸಿದ ಆಸ್ತಿ, ಮತ್ತು ಅಧಿಕಾರ ಸಹ ಶಾಶ್ವತವಲ್ಲ. ಆದರೆ ಬದುಕಿನ ಅವಧಿಯಲ್ಲಿ ಮಾಡಿರುವ
ಪರೋಪಕಾರ, ಪುಣ್ಯದ ಕೆಲಸಗಳು, ದಾನಧರ್ಮದ ಕಾರ್ಯಗಳು ಮನುಷ್ಯನ ಹೆಸರನ್ನು ಶಾಶ್ವತಗೊಳಿಸುತ್ತಿವೆ. ನಮ್ಮ ಬದುಕಿನ ಅವಧಿಯಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಕಾರ್ಯಗಳನ್ನು ಮಾಡಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ಅಂತಹ ಚಿಂತನೆಗಳು ಮನುಷ್ಯನಲ್ಲಿ ರೂಢಿಸಿಕೊಳ್ಳಬೇಕು ಎಂದರು.

ADVERTISEMENT

ಸಮಾಜಕ್ಕೆ ಉತ್ತಮ ಹೆಜ್ಜೆ ಗುರುತುಗಳು ಉಳಿಯಬೇಕು. ಮಾಡಿರುವ ಕಾರ್ಯಗಳ ಸಾಧನೆ ಇತರರಿಗೆ ಮಾದರಿಯಾಗಬೇಕು. ಇತರರನ್ನು ಪ್ರೀತಿಯಿಂದ ಕಾಣಿರಿ. ದ್ವೇಷ, ಅಸೂಹೆಗಳು ಮನುಷ್ಯನ
ಏಳ್ಗೆಯನ್ನು ಕುಂಠಿತಗೊಳಿಸುತ್ತವೆ. ಯಾರು ವೈರಿಗಳಲ್ಲ. ಸರ್ವ ಸಮುದಾಯದವರು ಸೇರಿ ಸಮಾನತೆ ಬದುಕು ನಡೆಸಿ. ಅದರಿಂದ ನಾಡಿನಲ್ಲಿ ಶಾಂತಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಮಠಮಂದಿರಗಳು ಸರ್ವ ಜನರಿಗೆ ಅನ್ನ ಮತ್ತು ಅಕ್ಷರ ನೀಡುವ ಜ್ಞಾನಕೇಂದ್ರಗಳಾಗಿವೆ. ಅದರಿಂದ ಭಕ್ತಿ ಮಾರ್ಗ ಕಾಣಲು ಸಾಧ್ಯವಿದೆ ಎಂದರು.

ಬಸವಕೇಂದ್ರ ತಾಲ್ಲೂಕು ಅಧ್ಯಕ್ಷ ರವಿ ಬಂಕಾಪುರ ಅಧ್ಯಕ್ಷತೆ ವಹಿಸಿದ್ದರು. ಬಂಕಾಪುರದ ರೇವಣಸಿದ್ದೇಶ್ವರ ಸ್ವಾಮೀಜಿ, ಹೊತ್ನಹಳ್ಳಿ ಶಂಭುಲಿಂಗ ಸ್ವಾಮೀಜಿ, ಹತ್ತಿಮತ್ತೂರದ ನಿಜಗುಣ ಶಿವಯೋಗಿ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಮುಖಂಡ ಶರಣಬಸಪ್ಪ ಕಿವುಡನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ವಿಶ್ವನಾಥ ಕಂಬಾಳಿಮಠ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ, ಸಹದೇವಪ್ಪ ಗುಳೆದಕೇರಿ, ಮುದ್ದಪ್ಪ ಗುಳೇದಕೇರಿ, ಖಾಜಿಸಾಬ ದರ್ಗಾ, ಸಿ.ವಿ.ಮತ್ತಿಗಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗೆಶ್ವರ ಕಲಿವಾಳ, ಉಪಾಧ್ಯಕ್ಷೆ ಲಕ್ಷ್ಮವ್ವ ವಾಲಿಕಾರ, ಚನ್ನಬಸಪ್ಪ ಕುರಗೋಡಿ, ರಾಜೇಶ್ವರಿ ಬಡಿಗೇರ, ಗದಿಗಯ್ಯ ಹಿರೇಮಠ, ಮಂಜುಳಾ ಇಚ್ಚಂಗಿ, ರತ್ನವ್ವ ಓಲೇಕಾರ, ಶಿರಾಜಅಹ್ಮದ ಮುಲ್ಲಾ, ಬಸವರಾಜ ಹೆಸರೂರ, ಶಂಭು ಆಜೂರ, ಸಂಗಪ್ಪ ವಡವಿ, ಲಕ್ಷ್ಮೀ ಶೆಟ್ಟರ, ಶೇಖವ್ವ ಚಂದ್ರಗೇರಿ, ಬಸವರಾಜ ಮಸಳಿ, ಶಂಭಣ್ಣ ಚಿಗಳ್ಳಿ, ಎಸ್.ಎನ್.ಲಕ್ಷ್ಮೇಶ್ವರ, ಗಂಗಾಧರ ಭಾವಿಕಟ್ಟಿ, ಸುಭಾಸ ಮಸಳಿ, ಗೋವಿಂದ ಕುಲಕರ್ಣಿ ಸೇರಿದಂತೆ ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.

ಕಲಾವಿದ ಚನ್ನಬಸಪ್ಪ ಬೈಲವಾಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.