ADVERTISEMENT

‘ಸಿದ್ಧಸಿರಿ’ ಸಂಸ್ಥೆಯಿಂದ ಸಮಾಜಮುಖಿ ಸೇವೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 14:36 IST
Last Updated 18 ಜನವರಿ 2021, 14:36 IST
ಹಾವೇರಿ ನಗರದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಸ್ಥೆಯ 134ನೇ ಶಾಖೆಯನ್ನು ಸಂಸದ ಶಿವಕುಮಾರ ಉದಾಸಿ ಸೋಮವಾರ ಉದ್ಘಾಟಿಸಿದರು. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ನೆಹರು ಓಲೇಕಾರ, ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಶಿವರಾಜ ಸಜ್ಜನ ಇದ್ದಾರೆ  
ಹಾವೇರಿ ನಗರದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಸ್ಥೆಯ 134ನೇ ಶಾಖೆಯನ್ನು ಸಂಸದ ಶಿವಕುಮಾರ ಉದಾಸಿ ಸೋಮವಾರ ಉದ್ಘಾಟಿಸಿದರು. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ನೆಹರು ಓಲೇಕಾರ, ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಶಿವರಾಜ ಸಜ್ಜನ ಇದ್ದಾರೆ     

ಹಾವೇರಿ: ‘ಹದಿನಾಲ್ಕು ವರ್ಷಗಳ ಅವಧಿಯಲ್ಲಿ ಸಿದ್ಧಸಿರಿ ಸಹಕಾರಿ ಸಂಸ್ಥೆ 134 ಶಾಖೆಗಳನ್ನು ತೆರೆಯುತ್ತಿರುವುದು ಹೆಮ್ಮೆಯ ವಿಚಾರ. ಸಂಸ್ಥೆಯ ಮೇಲೆ ಜನರು ತೋರಿರುವ ಪ್ರೀತಿ, ವಿಶ್ವಾಸ ಹಾಗೂ ಸಿಬ್ಬಂದಿಯ ಪ್ರಾಮಾಣಿಕತೆಯೇ ಸಾಧನೆಗೆ ಕಾರಣವಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಸ್ಥೆಯ 134ನೇ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

ಸಂಸ್ಥೆಯು 22,464 ಸದಸ್ಯರು, ₹12 ಕೋಟಿ ಷೇರು ಬಂಡವಾಳ, ₹781 ಕೋಟಿ ಠೇವಣಿಗಳು, ₹814 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, 2019–20ನೇ ಸಾಲಿನಲ್ಲಿ ₹3.33 ಕೋಟಿ ಲಾಭ ಗಳಿಸಿದೆ. ₹77 ಕೋಟಿಯನ್ನು ಹೂಡಿಕೆ ಮಾಡಿದೆ. ₹761 ಕೋಟಿ ಸಾಲ ನೀಡಿದೆ ಎಂದು ಹೇಳಿದರು.

ADVERTISEMENT

‘ಸಿದ್ಧಸಿರಿಯು’ ಲಾಭ–ನಷ್ಟದ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗದೆ, ರೈತರಿಗೆ ಗೋದಾಮು ನಿರ್ಮಾಣ, 5100 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಶೀತಲೀಕರಣ ಘಟಕ, ‘ಸಿದ್ಧಸಿರಿ ಕೃಷಿ ಕೇಂದ್ರ’,‘ಸಿದ್ಧಸಿರಿ ಇಂಧನ ಕೇಂದ್ರ’ ‘ಶುದ್ಧ ನೀರಿನ ಘಟಕ’, ಗೋಶಾಲೆ, ವಿಭೂತಿ ತಯಾರಿಕೆ, ಡಯಾಲಿಸಿಸ್‌ ಕೇಂದ್ರ ನಡೆಸುವ ಮಾಡುವ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.

ಶಾಖೆ ಉದ್ಘಾಟಿಸಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ, ‘ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಕ್ಕೆಜೋಳವನ್ನು ಬೆಳೆಯಲಾಗುತ್ತದೆ. ಹೀಗಾಗಿ ‘ಮೆಕ್ಕೆಜೋಳ ಆಧಾರಿತ ಪಾರ್ಕ್’, ಮಾವು ಸಂಸ್ಕರಣಾ ಘಟಕ’ ತೆರೆಯಲು ಸಂಸ್ಥೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ನೆಹರು ಓಲೇಕಾರ, ಮಾಜಿ ಶಾಸಕ ಶಿವರಾಜ ಸಜ್ಜನ, ರಮೇಶ ಪಾಟೀಲ, ಪದಾಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.