ಹಾವೇರಿ: ‘ಇಂದ್ರಜಿತ್ ಲಂಕೇಶ್ ಅವರು ಡ್ರಗ್ ಮಾಫಿಯಾ ಬಗ್ಗೆ ಹೇಳಿಕೆ ಕೊಡುತ್ತಾ ಈಗ ಹೀರೊ ಆಗಲು ಹೊರಟಿದ್ದಾರೆ. ಆದರೆ, ಅವರ ಅಕ್ಕಗೌರಿ ಲಂಕೇಶ್ ಅವರೇ ಮಾದಕ ದ್ರವ್ಯ ವ್ಯಸನಿಯಾಗಿದ್ದರೂ ಯಾಕೆ ಅಂದು ಮಾತನಾಡಲಿಲ್ಲ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಚಿತ್ರರಂಗ ಸುಧಾರಣೆ ಬಗ್ಗೆ ಇಂದ್ರಜಿತ್ ಲಂಕೇಶ್ ಮಾತನಾಡುತ್ತಿದ್ದಾರೆ. ಆದರೆ, ವ್ಯಸನಿಯಾಗಿದ್ದ ಅವರ ತಂಗಿಯನ್ನೇಕೆ ಸುಧಾರಣೆ ಮಾಡಲಿಲ್ಲ. ಚಿರಂಜೀವಿ ಸರ್ಜಾ ಮೃತಪಟ್ಟಿದ್ದು, ಸತ್ತವರ ಬಗ್ಗೆ ಮಾತನಾಡುವ ಅವಶ್ಯ ಏನಿದೆ. ಸರ್ಜಾ ಕುಟುಂಬಕ್ಕೆ ಚಿತ್ರರಂಗದಲ್ಲಿ ಉತ್ತಮ ಹೆಸರಿದೆ. ಅವರ ಕುಟುಂಬದ ಮೇಲೆ ಏಕೆ ವಿನಾಕಾರಣ ಆಪಾದನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಡ್ರಗ್ ಮತ್ತು ಸೆಕ್ಸ್ ಮಾಫಿಯಾ ಸಕ್ರಿಯವಾಗಿದೆ. ಇತ್ತೀಚೆಗೆ ಕಾಲೇಜು ಅಂಗಳದಿಂದ ಹೈಸ್ಕೂಲ್ವರೆಗೆ ಡ್ರಗ್ ಮಾಫಿಯಾ ಕಾಲಿಟ್ಟಿರುವುದು ಅಪಾಯಕಾರಿ ಬೆಳವಣಿಗೆ. ಪೊಲೀಸರು ಮತ್ತು ರಾಜಕಾರಣಿಗಳ ಕೈವಾಡವಿಲ್ಲದೆ ಮಾದಕ ವಸ್ತುಗಳ ಪೂರೈಕೆ ಸಾಧ್ಯವಿಲ್ಲ. ಹ್ಯಾರಿಸ್ ಮಗ ಕೂಡ ಈ ಜಾಲದಲ್ಲಿದ್ದಾನೆ.ಪೊಲೀಸರಿಗೆ ಜಾಲದ ಇಂಚಿಂಚೂ ಗೊತ್ತಿದೆ. ರಾಜಕೀಯ ಒತ್ತಡ ಜಾಸ್ತಿಯಾದಾಗ ಬಾಯಿ ಬಂದ್ ಮಾಡಿಕೊಳ್ಳುತ್ತಾರೆ ಎಂದು ಆರೋಪ ಮಾಡಿದರು.
ಪೊಲೀಸರು ಮಾದಕ ವಸ್ತು ವಶಪಡಿಸಿಕೊಂಡಿರುವ ಬಗ್ಗೆ ಈಗ ದೊಡ್ಡ ಸುದ್ದಿಯಾಗುತ್ತಿದೆ. ಇದು ಮೊದಲನೇಲ್ಲ, ಇದೇ ರೀತಿ ಅನೇಕ ಬಾರಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2009ರಲ್ಲಿ ನಮ್ಮ ಕಾರ್ಯಕರ್ತರು ಪಬ್ವೊಂದರ ಮೇಲೆ ದಾಳಿ ನಡೆಸಿದ್ದರು. ಆಗ 14 ಯುವತಿಯರು ಮಾದಕ ದ್ರವ್ಯ ಸೇವನೆ ಮಾಡಿದ್ದರು. ಈ ಬಗ್ಗೆ 8 ದೂರುಗಳು ದಾಖಲಾಗಿದ್ದವು. ಅಂದು ಸರ್ಕಾರ ಎಚ್ಚೆತ್ತುಕೊಂಡು, ಕಠಿಣ ಕ್ರಮ ಕೈಗೊಂಡಿದ್ದರೆ ಈ ಜಾಲ ಇಷ್ಟು ವ್ಯಾಪಕವಾಗಿ ಬೆಳೆಯುತ್ತಿರಲಿಲ್ಲ. ದಾಳಿ ಸಂದರ್ಭ ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.