ಹಾವೇರಿ: ಮುಂಬೈನಿಂದ ತನ್ನ ಕುಟುಂಬದೊಂದಿಗೆ ಜಿಲ್ಲೆಗೆ ಬಂದಿದ್ದ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಉಳಿದಿದ್ದ ಕಾರ್ಮಿಕನೊಬ್ಬನಿಗೆ ಇಂದು ಕರೋನಾ ಸೋಂಕು ಪತ್ತೆಯಾಗಿದೆ. 57 ವರ್ಷದ ಪಿ-3271 ವ್ಯಕ್ತಿಗೆ ಕೋವಿಡ್–19 ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಪ್ರವಾಸ ಹಿನ್ನೆಲೆ:P-3271 ಮೂಲತಃ ಶಿಗ್ಗಾವಿ ಪಟ್ಟಣದವರಾಗಿದ್ದು, ಇವರು ಮುಂಬೈನ ಸಿದ್ಧಿವಿನಾಯಕ ಚಾಳ ಸಾಂತಾಕ್ರೂಸ್ನಲ್ಲಿ ಹೆಂಡತಿ ಮತ್ತು ಮಗಳೊಂದಿಗೆ ವಾಸವಾಗಿದ್ದು ಅಲ್ಲಿಯೇ ಸ್ಥಳೀಯ ಕಾರ್ಮಿಕನಾಗಿ ದುಡಿಯುತ್ತಿದ್ದರು. ಮೇ 19ರಂದು ಓಲಾ ಕಂಪನಿ ಬಾಡಿಗೆ ಕಾರಿನಲ್ಲಿ ಬೆಳಿಗ್ಗೆ ಹೊರಟು ಪೂನಾ, ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ತಡಸ ಚೆಕ್ ಪೋಸ್ಟ್ಗೆ ಅಂದು ರಾತ್ರಿ 9.30ಕ್ಕೆ ಆಗಮಿಸಿದ್ದರು. ವೈದ್ಯಕೀಯ ತಪಾಸಣೆ ನಂತರ ಚಕ್ಕಿನಕಟ್ಟೆ ರಾಣಿ ಚನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ 24ರಂದು ಗಂಟಲು ದ್ರವ ಪರೀಕ್ಷೆಗೆ ಕಳಹಿಸಲಾಗಿತ್ತು. ಮೇ 31ರ ರಾತ್ರಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಸೋಂಕಿತನಿಗೆ ಕೋವಿಡ್–19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಕ್ಕಿನಕಟ್ಟೆ ರಾಣಿ ಚೆನ್ನಮ್ಮ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಈಗಾಗಲೇ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ಜಕಿನಕಟ್ಟಿ ಗ್ರಾಮವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಶಿಗ್ಗಾವಿ ತಾಲ್ಲೂಕು ತಹಶೀಲ್ದಾರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಆರುಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.