ADVERTISEMENT

ಹಾವೇರಿ: ಗ್ರಾಹಕನಿಗೆ ಅನ್ಯಾಯ, ಬ್ಯಾಂಕ್‌ಗೆ ದಂಡ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 15:02 IST
Last Updated 7 ನವೆಂಬರ್ 2020, 15:02 IST
ಹಾವೇರಿಯ ನಗರದ ವಿದ್ಯಾನಗರದಲ್ಲಿರುವ ‘ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ’ ಕಟ್ಟಡದ ಹೊರನೋಟ
ಹಾವೇರಿಯ ನಗರದ ವಿದ್ಯಾನಗರದಲ್ಲಿರುವ ‘ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ’ ಕಟ್ಟಡದ ಹೊರನೋಟ   

ಹಾವೇರಿ: ಎಟಿಎಂ ಕೇಂದ್ರದಲ್ಲಿ ಹಣ ಬಾರದೇ ಇದ್ದರೂ ವಿತ್‌ಡ್ರಾ ಆಗಿದೆ ಎಂದು ತೋರಿಸಿದ್ದ ಪ್ರಕರಣದಲ್ಲಿ, ಐದು ದಿನಗಳಲ್ಲಿ ಗ್ರಾಹಕರ ಖಾತೆಗೆ ಹಣ ಜಮಾ ಮಾಡದೆ 10 ತಿಂಗಳು ವಿಳಂಬ ಮಾಡಿದ ಬ್ಯಾಂಕಿಗೆ 30 ದಿನಗಳ ಒಳಗೆ ₹10 ಸಾವಿರ ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗೆ ₹3 ಸಾವಿರ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.

ಬ್ಯಾಡಗಿ ಪಟ್ಟಣದ ಶಿಕ್ಷಕ ಷರೀಫಸಾಬ ರಾಜೇಸಾಬ ಶಿಡೇನೂರ ಅವರು ಎಸ್.ಬಿ.ಐ. ಬ್ಯಾಂಕಿನ ಎ.ಟಿ.ಎಂ. ಕಾರ್ಡ್‌ ಬಳಸಿ ಎಕ್ಸಿಸ್ ಬ್ಯಾಂಕಿನ ಎ.ಟಿ.ಎಂ.ನಲ್ಲಿ ಡಿ.2, 2019ರಂದು ₹10 ಸಾವಿರ ಡ್ರಾ ಮಾಡಲು ಹೋದಾಗ ಹಣ ಬಾರದೇ ಇದ್ದರೂ, ₹10,000 ಸಾವಿರ ವಿತ್‍ಡ್ರಾ ಆಗಿರುವುದಾಗಿ ಸಂದೇಶ ಬಂದಿತ್ತು.

ಈ ಕುರಿತು ಷರೀಫಸಾಬ ಸಂಬಂಧಪಟ್ಟ ಬ್ಯಾಡಗಿ ಎಸ್.ಬಿ.ಐ. ಹಾಗೂ ಎಕ್ಸಿಸ್ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ತಮಗಾದ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಬ್ಯಾಂಕ್ ಶಾಖೆಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ADVERTISEMENT

ಎಸ್.ಬಿ.ಐ. ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ಗ್ರಾಹಕನ ಖಾತೆಗೆ ಹಣ ಡ್ರಾ ಮಾಡಿದ ಐದು ದಿನದಿಂದ ಗ್ರಾಹಕನ ಖಾತೆಗೆ ₹10 ಸಾವಿರ ಹಿಂದಿರುಗಿಸುವವರೆಗೆ ಪ್ರತಿ ದಿನಕ್ಕೆ ₹100 ದಂಡ ಜಮೆ ಮಾಡಬೇಕು. ಎಕ್ಸಿಸ್ ಬ್ಯಾಂಕ್ ಶಾಖೆ ವ್ಯವಸ್ಥಾಪಕರು ದಾವೆಯ ಖರ್ಚು ₹2 ಸಾವಿರ ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗಾಗಿ ₹3 ಸಾವಿರವನ್ನು ಗ್ರಾಹಕನ ಖಾತೆಗೆ ಜಮೆ ಮಾಡಲು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.