ರಟ್ಟೀಹಳ್ಳಿ: ಗ್ರಾಮೀಣ ಅಂಚೆ ಜೀವ ವಿಮೆ ಪಡೆಯುವುದರಿಂದ ಹೆಚ್ಚಿನ ಭದ್ರತೆಯೊಂದಿಗೆ ಹೆಚ್ಚು ಲಾಭಾಂಶ ಪಡೆಯಲು ಸಾಧ್ಯ ಎಂದು ರಾಣೇಬೆನ್ನೂರ ಉಪವಿಭಾಗದ ಅಂಚೆ ನಿರೀಕ್ಷಕ ಬಿ.ಎಚ್. ನಾಯ್ಕ್ ಹೇಳಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಬುಧವಾರ ಗ್ರಾಮೀಣ ಅಂಚೆ ಜೀವ ವಿಮೆ ಮೇಳದಲ್ಲಿ ಮಾತನಾಡಿದರು. ‘ಸಾರ್ವಜನಿಕರು ತಮ್ಮ ಉಳಿತಾಯದ ಹಣವನ್ನು ಹಂತ ಹಂತವಾಗಿ ಅಂಚೆ ಕಚೇರಿಯಲ್ಲಿ ಹಲವಾರು ಯೋಜನೆಗಳ ಅಡಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಬಡ್ಡಿ ಪಡೆಯಬಹುದಾಗಿದೆ. ಅಂಚೆ ಕಚೇರಿಯಲ್ಲಿನ ಸಾರ್ವಜನಿಕ ಹಣ ಹೆಚ್ಚು ಸುರಕ್ಷಿತ’ ಎಂದರು.
‘ಗ್ರಾಮೀಣ ಭಾಗದ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವವರು ಸಾರ್ವಜನಿಕರಿಗೆ ಅಂಚೆ ಕಚೇರಿಯ ಉಳಿತಾಯ ಯೋಜನೆ ಕುರಿತು ಸಮಗ್ರ ಮಾಹಿತಿ ಒದಗಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಗ್ರಾಮೀಣ ಅಂಚೆ ಜೀವ ವಿಮಾ ಸಲಹೆಗಾರ ಮಹದೇವ ಕಿತ್ತೂರ ಮಾತನಾಡಿ, ‘10 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ, 10 ವರ್ಷ ಒಳಗಿನ ಗಂಡು ಮಕ್ಕಳಿಗಾಗಿ ಸುಕುಮಾರ ಯೋಜನೆಯಡಿ ಉಳಿತಾಯ ಮಾಡುವುದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕುಟುಂಬಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು. ಮೇಳದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಅಂಚೆ ನೌಕರರು ಪಾಲ್ಗೊಂಡಿದ್ದರು.
ರಟ್ಟೀಹಳ್ಳಿ ಪೋಸ್ಟ್ ಮಾಸ್ತರ ಗಂಗಾಧರ ನಾಯ್ಕ್ ಇದ್ದರು. ಗುರುರಾಜ ಕಟ್ಟಿ ಸ್ವಾಗತಿಸಿದರು. ಶರಣಪ್ಪ ಪೂಜಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.