
ಸವಣೂರು: ‘ಇಲ್ಲಿ ಕಲಾಲ್ ಸಮಾಜದ ಸಭಾಭವನ ನಿರ್ಮಾಣಕ್ಕೆ ₹25 ಲಕ್ಷ ಅನುದಾನ ನೀಡಲಾಗುವುದು. ಮುಂದಿನ ವರ್ಷ ಅದೇ ಭವನದಲ್ಲಿ ಕಾರ್ಯಕ್ರಮ ಮಾಡೋಣ’ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.
ಪಟ್ಟಣದ ಬಾಲಕೃಷ್ಣ ನಗರದಲ್ಲಿ ಆಯೋಜಿಸಿದ್ದ ಬಾಲಕೃಷ್ಣ ಮಹಾರಾಜರ ಧ್ಯಾನ ಮಂದಿರದ ಪ್ರಥಮ ವಾರ್ಷಿಕೋತ್ಸವ ಹಾಗೂ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸೂರ್ಯವಂಶಿ ಕ್ಷತ್ರಿಯ ಕಲಾಲ್ ಕಾಟಿಗ ಸಮಾಜದವರು ಯಾರಿಂದ ಏನನ್ನೂ ಬಯಸದೆ, ಸ್ವಂತ ದುಡಿಮೆಯಿಂದ ಜೀವನ ನಡೆಸುತ್ತಾರೆ. ಸಮಾಜದಲ್ಲಿ ತಮ್ಮದೇ ಆದ ಚಾಪು ಮುಡಿಸಿದ್ದಾರೆ. ಜೀವನದಲ್ಲಿ ಆಸ್ತಿ, ಅಂತಸ್ತು, ಐಶ್ವರ್ಯ ಶಾಶ್ವತವಲ್ಲ. ದೇವರು ನೀಡಿದ್ದರಲ್ಲಿ ಸಮಾಜಕ್ಕೆ ಒಂದಿಷ್ಟು ಕೊಡುಗೆ ನೀಡುವುದು ಶಾಶ್ವತವಾಗಿರುತ್ತದೆ’ ಎಂದರು.
ಮಹಾರಾಷ್ಟ್ರದ ನಂದೇಶ್ವರ ಬಾಳು ಸಾಹೇಬ ಮಹಾರಾಜರು ಮಾತನಾಡಿ, ‘ಮನುಷ್ಯ ಜನ್ಮದ ಸಾರ್ಥಕ್ಯ ಹಾಗೂ ಸರ್ವರ ಹಿತಕ್ಕಾಗಿ ಹಗಲಿರುಳು ಶ್ರಮಿಸುವವರಿಗೆ ಶರಣರು, ಯೋಗಿಗಳು ಎನ್ನುತ್ತಾರೆ. 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾಗಿದೆ. ಸುಳ್ಳು, ಕಪಟ, ಮೋಸ ಯಾವುದೆಂದು ವಿಚಾರ ಮಾಡುವ ಶಕ್ತಿ ಮನುಷ್ಯನಲ್ಲಿದ್ದು, ವಿವೇಚನೆಯಿಂದ ಜೀವನ ಸಾಗಿಸಬೇಕು’ ಎಂದು ತಿಳಿಸಿದರು.
ಶೃಂಗೇರಿಯ ರಾಜರಾಜೇಶ್ವರ ಸಂಸ್ಥಾನ ಭಾರತೀಯ ಕ್ಷತ್ರೀಯ ಧರ್ಮಪೀಠದ ವಿಶ್ವಾಧಿರಾಜರು ಸಾನ್ನಿಧ್ಯ, ಸೂರ್ಯವಂಶ ಕ್ಷತ್ರೀಯ ಕಲಾಲ ಕಾಟಿಕ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಕೃಷ್ಣಾಜಿ ಕಲಾಲ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಲಕ್ಷಣ ಗಂಡಗಾಳೆ, ಜಿಲ್ಲಾ ಘಟಕದ ಅಧ್ಯಕ್ಷ ಚನ್ನಪ್ಪ ಕಲಾಲ, ಆರ್.ಕೆ. ಸಿದ್ರಾಮಣ್ಣ, ವಕೀಲ ರಾಮಚಂದ್ರ ಕಲಾಲ, ಭಾಗ್ಯಶ್ರೀ ಬಾಬಣ್ಣ, ಪ್ರಕಾಶ ಕಲಾಲ, ಮೋಹನ ಕಲಾಲ, ಹರೀಶ ಕಲಾಲ, ಸುರೇಶ ಮಂಡಲಕರ, ಅನುರಾಧಾ ಗೋಡಕೆ, ಮೋಹನ ಕಲಾಲ, ಸುರೇಶ ಜೋರಾಪುರಿ, ನಾಗರಾಜ ಜೋರಾಪುರಿ ಇದ್ದರು.