ಹಾವೇರಿ: ‘ಕಿತ್ತೂರು ಉತ್ಸವ ಮಾದರಿಯಲ್ಲಿಯೇ ಕನಕೋತ್ಸವ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ’ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿರುವ ಕನಕ ಗುರುಪೀಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಗಿನೆಲೆ ಪ್ರಾಧಿಕಾರದಿಂದ ಮೂರು ದಿನಗಳವರೆಗೆ ಕನಕೋತ್ಸವ ನಡೆಯಲಿದೆ. ದಾಸಶ್ರೇಷ್ಠ ಕನಕದಾಸರ ಜೀವನ, ಬದುಕು– ಬರಹ, ಸಾಧನೆ ಕುರಿತು ಜನರಿಗೆ ತಿಳಿಸುವ ಉದ್ದೇಶವಿದೆ. ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ಕನಕೋತ್ಸವದ ಸಮಯ ನಿಗದಿಪಡಿಸಲಾಗುವುದು’ ಎಂದರು.
‘ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಮಾಜದ ಸಂಘಟನೆ ಮಾಡುತ್ತಿರುವುದು ಸಂತಸ ತಂದಿದೆ. ಈಗ, ನೂತನ ಸಮಿತಿ ರಚಿಸಿರುವುದು ಖುಷಿ ವಿಷಯ. ನ.8ರಂದು ಕನಕದಾಸರ ಜಯಂತಿ ಮತ್ತು ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.
ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ‘ಕನಕದಾಸರ ಜಯಂತಿ ಅಂಗವಾಗಿ ನ.1ರಿಂದ ಇಟಗಿ ಭೀಮಾಂಭಿಕಾ ಪುರಾಣ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರ ಜವಾಬ್ದಾರಿಯನ್ನು ರಾಣೆಬೆನ್ನೂರು ತಾಲ್ಲೂಕಿನ ಮುಖಂಡರಿಗೆ ಹಾಗೂ ಭಕ್ತರಿಗೆ ವಹಿಸಲಾಗಿದೆ’ ಎಂದು ಹೇಳಿದರು.
ಇತ್ತೀಚೆಗೆ ನಿಧನರಾದ ಸಮಾಜದ ಮುಖಂಡರಾದ ಮಾರುತಿ ಹರಿಹರ ಹಾಗೂ ಮಾಲತೇಶ ಬಣಕಾರ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನೂತನ ಪದಾಧಿಕಾರಿಗಳು: ಕುರುಬ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬ್ಯಾಡಗಿಯ ನಾಗರಾಜ ಆನ್ವೇರಿ, ಉಪಾಧ್ಯಕ್ಷರಾಗಿ ಅಶೋಕ ಬಣಕಾರ, ದಾನಪ್ಪ ಗಂಟೇರ್, ಪರಶುರಾಮ ಬಗಾಡೆ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಚೋಳಪ್ಪ ತಸ್ವಾಳ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತಗೌಡ ಗಾಜೀಗೌಡ್ರ, ಖಜಾಂಚಿಯಾಗಿ ರವಿ ಕಂಬಳಿ, ಸಂಘಟನಾ ಕಾರ್ಯದರ್ಶಿಗಳಾಗಿ ಯಲ್ಲಪ್ಪ ಗದಿಗೆಪ್ಪನವರ, ನಿರ್ದೇಶಕರಾಗಿ ಬಸವರಾಜ ಕಂಬಳಿ, ರವಿ ಕರಿಗಾರ, ಡಿ.ವಿ.ಅಜ್ಜಣ್ಣನವರ, ಆನಂದ ಇಟಗಿ, ನಿಂಗಪ್ಪ ಕರಬಣ್ಣನವರ, ಮಲ್ಲಿಕಾರ್ಜುನ ಕರಲಿಂಗಣ್ಣನವರ, ರಾಮಚಂದ್ರ ಯಲ್ಲಪ್ಪ ಗದಿಗೆಣ್ಣನವರ, ಸುರೇಶ ದೊಡ್ಡಕುರುಬರ, ರಾಣೋಜಿ, ಯಲ್ಲಪ್ಪ ನರಗುಂದ ಅವರನ್ನು ಆಯ್ಕೆ ಮಾಡಲಾಯಿತು.
ಸಿ.ಎಂ ಜೊತೆ ಚರ್ಚಿಸಿ ದಿನ ನಿಗದಿ ನೂತನ ಪದಾಧಿಕಾರಿಗಳ ಆಯ್ಕೆ ಕನಕದಾಸರ ಜಯಂತಿಯಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.