ತಿಳವಳ್ಳಿ: ‘ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಕನ್ನಡ ಜ್ಯೋತಿಯನ್ನು ಹೊತ್ತು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಿರುವ ಕನ್ನಡ ರಥ ತಿಳವಳ್ಳಿಗೆ ಆಗಮಿಸಿದಾಗ ಗ್ರಾಮ ಪಂಚಾಯಿತಿ, ಕಸಾಪ ಗ್ರಾಮ ಘಟಕದ ಸದಸ್ಯರು, ಮಹಿಳೆಯರು ಹಾಗೂ ಶಾಲಾ ಮಕ್ಕಳು ಅದ್ಧೂರಿಯಾಗಿ ಬರಮಾಡಿಕೊಂಡರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಮಾರ ಲಕ್ಮೋಜಿ ಮಾತನಾಡಿ, ‘ಕನ್ನಡ ಕೇವಲ ಭಾಷೆಯಲ್ಲ. ತನ್ನದೇ ಆದ ನೆಲ, ಜಲ, ಸಂಸ್ಕೃತಿಯ ಹಿರಿಮೆಯನ್ನು ಒಳಗೊಂಡಿದೆ. ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ’ ಎಂದು ಶುಭಹಾರೈಸಿದರು.
ಕಸಾಪ ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ‘ಡಿ. 20 ರಿಂದ 22ರವರೆಗೆ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥವು 87 ದಿನಗಳ ಕಾಲ ರಾಜ್ಯದ 240 ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ಈ ರಥಯಾತ್ರೆಯ ಮೂಲಕ ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ’ ಎಂದರು.
ನಂತರ ಕನ್ನಡ ರಥವು ಗ್ರಾಮದ ಸಕಲ ಬೀದಿಗಳಲ್ಲಿ ಸಂಚರಿಸಿ ಹರ್ಡೀಕರ ವೃತ್ತಕ್ಕೆ ಬಂದು ತಲುಪಿತು. ನಂತರ ಕನ್ನಡಾಂಬೆಗೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಪ್ರೋಜಾ ಕನವಳ್ಳಿ, ಪಿಡಿಒ ವಿಶ್ವನಾಥ ಮುದಿಗೌಡ್ರ, ರಾಜು ಶೇಷಗಿರಿ, ಸಮದ್ ಮೂಡಿ, ವಾಸೀಮ್ ಪಠಾಣ, ಬಸವರಾಜ ಚೌವ್ಹಾಣ, ರಮೇಶ ಭಜಂತ್ರಿ, ಕೆಂಚಪ್ಪ ಕನಕಣ್ಣನವರ, ಆರೀಪ್ ಲೋಹಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.