ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ: ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 16:20 IST
Last Updated 26 ಜನವರಿ 2021, 16:20 IST
ಏಕನಾಥ ಬಾನುವಳ್ಳಿ, ಜಿ.ಪಂ. ಅಧ್ಯಕ್ಷ
ಏಕನಾಥ ಬಾನುವಳ್ಳಿ, ಜಿ.ಪಂ. ಅಧ್ಯಕ್ಷ   

ಹಾವೇರಿ: ‘ಸಾಮಾಜಿಕ ಜಾಲತಾಣ, ಆಧುನಿಕ ಹಾಗೂ ಸಾಂಪ್ರದಾಯಿಕ ಮಾದರಿಯ ಬಹು ಮಾಧ್ಯಮಗಳನ್ನು ಬಳಸಿಕೊಂಡು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವ್ಯಾಪಕ ಪ್ರಚಾರ ಯೋಜನೆಯನ್ನು ರೂಪಿಸಲು ತೀರ್ಮಾನಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಏಕನಾಥ ಬಾನುವಳ್ಳಿ ತಿಳಿಸಿದ್ದಾರೆ.

ಸೋಮವಾರ ಜಿಲ್ಲಾ ಪಂಚಾಯಿತಿಯ ತಮ್ಮ ಕಚೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿ ಸಭೆ ನಡೆಸಿದರು. ಸಾಮಾಜಿಕ ಜಾಲತಾಣ ಬಳಕೆ ಒಳಗೊಂಡಂತೆ ಬೀದಿನಾಟಕ ಕಲಾ ತಂಡಗಳ ಬಳಕೆ ಸೇರಿದಂತೆ ಮಾದರಿಯ ಪ್ರಚಾರ ಮಾಧ್ಯಮಗಳನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಪ್ರಚಾರ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಸಮ್ಮೇಳನದ ಪ್ರಚಾರಕ್ಕೆ ರಾಜ್ಯವ್ಯಾಪಿ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪರಿಸ್ನೇಹಿ ಹೆದ್ದಾರಿ ಫಲಕಗಳ ಅಳವಡಿಕೆ, ನಗರ ವ್ಯಾಪ್ತಿಯಲ್ಲಿ ಕಟೌಟ್ ಅಳವಡಿಕೆ, ಸಾರಿಗೆ ಬಸ್, ವಾಹನಗಳಿಗೆ ಸ್ಟಿಕ್ಕರ್ ಅಳವಡಿಕೆ, ಕನ್ನಡ ಪ್ರಚಾರ ರಥದ ಮೂಲಕ ಜಿಲ್ಲೆಯ ಎಲ್ಲ ತಾಲ್ಲೂಕು ವ್ಯಾಪ್ತಿಯಲ್ಲಿ ಕಲಾ ತಂಡಗಳನ್ನು ಸಂಯೋಜಿಸಿ ಪ್ರಚಾರ, ಜಾಥಾ, ರ‍್ಯಾಲಿಗಳು ಸೇರಿದಂತೆ ವಿಭಿನ್ನವಾಗಿ ಪ್ರಚಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ADVERTISEMENT

ಸಿಇಒ ಮೊಹಮ್ಮದ್‌ ರೋಶನ್‌ ಮಾತನಾಡಿ, ವಾಟ್ಸಾಪ್, ಟ್ವಿಟ್ಟರ್, ವೆಬ್‍ಪೇಜ್, ಫೇಸ್‍ಬುಕ್, ಇನ್‌ಸ್ಟಾಗ್ರಾಮ್‌, ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗುವುದು. ಅತ್ಯಾಧುನಿಕ ಮಾಧ್ಯಮ ಕೇಂದ್ರ, ಮಾಧ್ಯಮ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಸೇರಿದಂತೆ ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಹಾವೇರಿ ಉಪವಿಭಾಗಾಧಿಕಾರಿ ದಿಲೀಷ್‌ ಶಶಿ, ಪ್ರಚಾರ ಸಮಿತಿ ಸದಸ್ಯ ಕಾರ್ಯದರ್ಶಿ ಬಿ.ಆರ್. ರಂಗನಾಥ್, ತಾಲ್ಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ಕಾಂಬಳೆ, ಸಮಿತಿಯ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.