ADVERTISEMENT

ಹಾವೇರಿ | ಸರಳವಾಗಿ ಕಾರ ಹುಣ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 4:30 IST
Last Updated 6 ಜೂನ್ 2020, 4:30 IST
ಕಾರ ಹುಣ್ಣಿಮೆ ಪ್ರಯುಕ್ತ ಹಾವೇರಿ ತಾಲ್ಲೂಕಿನ ನಾಗನೂರಿನಲ್ಲಿ ಎತ್ತುಗಳಿಗೆ ಪೂಜೆ ಸಲ್ಲಿಸಲಾಯಿತು 
ಕಾರ ಹುಣ್ಣಿಮೆ ಪ್ರಯುಕ್ತ ಹಾವೇರಿ ತಾಲ್ಲೂಕಿನ ನಾಗನೂರಿನಲ್ಲಿ ಎತ್ತುಗಳಿಗೆ ಪೂಜೆ ಸಲ್ಲಿಸಲಾಯಿತು    

ಹಾವೇರಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಾದ್ಯಂತ ಕಾರ ಹುಣ್ಣಿಮೆಯನ್ನು ಶುಕ್ರವಾರ ಜನರು ಸರಳವಾಗಿ ಆಚರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳ ಮೈ ತೊಳೆದು, ಕೋಡಿಗೆ ಬಣ್ಣ ಬಳಿದು, ರಿಬ್ಬನ್‌ ಕಟ್ಟಿ ವಿಶೇಷ ಅಲಂಕಾರ ಮಾಡಿದ್ದರು. ಮನೆಗಳಲ್ಲಿ ಕರಿದ ಪದಾರ್ಥಗಳಾದ ಕೋಡಬಳೆ, ಕರಿಗಡುಬು, ಕರ್ಜಿಕಾಯಿ, ಹೋಳಿಗೆ ಮುಂತಾದ ಖಾದ್ಯಗಳನ್ನು ಮಾಡಿದ್ದರು. ನಂತರ ದೇವರಿಗೆ ಇಟ್ಟ ನೈವೇದ್ಯವನ್ನು ಎತ್ತುಗಳಿಗೆ ತಿನಿಸಿ, ಮಹಿಳೆಯರು ಆರತಿ ಬೆಳಗಿದರು.

ಪ್ರತಿ ವರ್ಷ ಚಕ್ಕಡಿ ಕಟ್ಟಿಕೊಂಡು ಮೈಲಾರ, ದೇವರಗುಡ್ಡ ಮತ್ತು ತಮ್ಮ ಮನೆತನದ ದೇವರಿಗೆ ವಿಶೇಷ ಪೂಜೆ ಕಾರ ಹುಣ್ಣಿಮೆ ಪ್ರಯುಕ್ತ ಹೋಗುತ್ತಿದ್ದರು. ಈ ವರ್ಷ ಲಾಕ್‌ಡೌನ್‌ ಇರುವ ಕಾರಣ ಮನೆಯಲ್ಲೇ ಸರಳವಾಗಿ ಹಬ್ಬ ಆಚರಿಸಿದರು.

ADVERTISEMENT

‘ಆಲದ ಮರಗಳಿಗೆ 12 ಸುತ್ತು ದಾರ ಕಟ್ಟಿದರೆ ಮನಸ್ಸಿನ ಆಸೆ ನೆರವೇರುತ್ತದೆ. ಸಾವಿತ್ರಿ ಗಂಡನಿಗೆ ಪೂಜೆ ಮಾಡಿದ ವ್ರತವನ್ನು ನಾವು ಆಚರಿಸುತ್ತಿದ್ದೇವೆ. ಐವರು ಹೆಣ್ಣುಮಕ್ಕಳಿಗೆ ಉಡಿ ತುಂಬಿ, ಆರ್ಶಿರ್ವಾದ ಪಡೆದಿದ್ದೇವೆ. ಇದರಿಂದ ಮುತ್ತೈದೆ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಆಲದ ಮರಕ್ಕೆ ಮಾವು, ಕಡಲೆ ಎಡೆಯನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಬಸವೇಶ್ವರ ನಗರದ ಸಿ.ಬ್ಲಾಕ್‌ ನಿವಾಸಿಗಳಾದ ರಾಧಾ ತಿವಾರಿ, ಗಾಯತ್ರಿ ದುಬೆ, ಪುಷ್ಪಾ ದುಬೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.