ಸವಣೂರು (ಹಾವೇರಿ): ತಾಲ್ಲೂಕಿನ ಹಳೆಮನ್ನಂಗಿ ಗ್ರಾಮದ ನಿಸ್ಸಿಮಗೌಡ್ರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರವೀಣ ಬಸನಗೌಡ ನೀರಲಗಿ ಬಡತನದಲ್ಲಿಯೂ ಎಸ್ಸೆಸ್ಸೆಲ್ಸಿಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ.
'ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನ, ತಂದೆ-ತಾಯಿಗಳ ಆಶೀರ್ವಾದ ಹಾಗೂ ಸಹಕಾರದಿಂದ ರಾಜ್ಯಕ್ಕೆ ಪ್ರಥಮಸ್ಥಾನ ಪಡೆಯಲು ಸಾಧ್ಯವಾಗಿದೆ.
ಶಿಕ್ಷಕರ ಬೋಧನೆಗೆ ತಕ್ಕಂತೆ ನಿತ್ಯ ವಿದ್ಯಾಭ್ಯಾಸ ಮಾಡಿದೆ. ಮನೆಯಲ್ಲಿ ಪಾಲಕರು ಕೂಡ ಸಹಕಾರ ನೀಡಿದರು' ಎಂದು ಪ್ರವೀಣ ನೀರಲಗಿ ತಿಳಿಸಿದರು.
'ಶಾಲೆಯಲ್ಲಿ ಪಾಠದೊಂದಿಗೆ ರಸಪ್ರಶ್ನೆ ಕಾರ್ಯಕ್ರಮ, ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮಗಳು ಪೂರಕವಾಗಿದೆ. ಮನೆಯಲ್ಲಿ ಸರಿಯಾಗಿ ಓದಲು ಗೊಂದಲ ಉಂಟಾಗುತ್ತದೆ ಎನ್ನುವ ಉದ್ದೇಶದಿಂದ ಶಾಲೆಯಲ್ಲಿ ವಾಸ್ತವ್ಯ ಹೂಡಿ ನಿರಂತರ ವಿದ್ಯಾಭ್ಯಾಸ ಕೈಗೊಂಡಿರುವುದು ರಾಜ್ಯಕ್ಕೆ ಪ್ರಥಮ ಬರಲು ಸಾಧ್ಯವಾಗಿದೆ' ಎಂದು ಅನಿಸಿಕೆ ವ್ಯಕ್ತಪಡಿಸಿದ.
'ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ವೈದ್ಯನಾಗುವ ಅಭಿಲಾಷೆ ಹೊಂದಿದ್ದು, ಕಡು ಬಡತನದಲ್ಲಿ ಇಚ್ಛೆಗೆ ತಕ್ಕಂತೆ ಸಾಧನೆ ಮಾಡಲು ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಯೂ ಆದ ಬಸವರಾಜ ಬೊಮ್ಮಾಯಿ ಅವರು ಸಹಕಾರ ನೀಡಿದರೆ ಅನುಕೂಲವಾಗುತ್ತದೆ' ಎಂಬುದು ವಿದ್ಯಾರ್ಥಿ ಪ್ರವೀಣ ಬಸನಗೌಡ ನೀರಲಗಿ ಅಭಿಮತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.