ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನ
ಹಾವೇರಿ: ‘ನಾಡಿನ ಬಂಗಾರದ ಗಿಂಡಿಲೇ, ನಾಡು ಸಿರಿಯಾಯಿತಲೇ ಪರಾಕ್’.
ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ದಸರಾ ದಿನವಾದ ಬುಧವಾರ ನಾಗಪ್ಪಜ್ಜ ಗೋರವಯ್ಯ ಅವರ ಮೂಲಕ ಹೊರಬಿದ್ದ ಕಾರ್ಣಿಕ ನುಡಿಯಿದು.
ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಮಾಲತೇಶ ದೇವಸ್ಥಾನದಲ್ಲಿ ಪ್ರತಿ ವರ್ಷವೂ ದಸರಾ ಹಬ್ಬದ ಪ್ರಯುಕ್ತ ಕಾರ್ಣಿಕ ಆಗುತ್ತದೆ. ಈ ವರ್ಷವೂ ಕಾರ್ಣಿಕ ಆಗಿದೆ. ಭಕ್ತರು ತಮ್ಮದೇ ಅರ್ಥದಲ್ಲಿ ಕಾರ್ಣಿಕವನ್ನು ವಿವರಿಸುತ್ತಿದ್ದಾರೆ.
ಕಾರ್ಣಿಕ ಬಗ್ಗೆ ಪ್ರಕಟಣೆ ನೀಡಿರುವ ದೇವಸ್ಥಾನದ ಸಮಿತಿ, ‘ನಮಗೆ, ನಮ್ಮ ನಾಡಿನ ಸಂಪತ್ತೇ ಶ್ರೇಷ್ಠ. ನಮ್ಮ ಸಂಪತ್ತಿನಿಂದ ನಮ್ಮ ನಾಡನ್ನು ಕಟ್ಟಿಕೊಳ್ಳಬೇಕಾಗಿದೆ. ಕೃಷಿ, ಸಣ್ಣ ಕೈಗಾರಿಕೆ, ಕರಕುಶಲತೆ ಇವು ನಮ್ಮ ನಾಡಿನ ಸಂಪತ್ತು. ಈ ಸಂಪತ್ತಿನ ಮೇಲೆ ನಮ್ಮ ನಾಡನ್ನು ಕಟ್ಟಿಕೊಳ್ಳಬೇಕಾಗಿದೆ. ವಿದೇಶಿ ಬಂಡವಾಳದ ಹಂಗಿಲ್ಲದೆ (ಅವಶ್ಯಕತೆ ಇಲ್ಲದೆ) ಸ್ವದೇಶಿ ಜ್ಞಾನ ಪರಂಪರೆಯ ಮೇಲೆ ವಿಶ್ವಾಸ ಇಟ್ಟರೆ, ಸಂಪತ್ತು ಭರಿತ ರಾಷ್ಟ್ರವನ್ನು ಕಟ್ಟಲು ಅನುಕೂಲವಾಗುವ ವಾತಾವರಣ ನಿರ್ಮಾಣವಾಗುತ್ತದೆ. ಹೀಗಾಗಿ, ಈ ನೆಲದ ಜ್ಞಾನದ ಬುತ್ತಿಯಾದ ಧರ್ಮ, ಅರ್ಥ, ಕಾಮ, ಮೋಕ್ಷದ ಚೌಕಟ್ಟಿನಲ್ಲಿ ನಾಡು ಸಮೃದ್ಧಗೊಳ್ಳುತ್ತದೆ ಎಂಬುದು ಕಾರ್ಣಿಕ ಮೂಲಕ ಭಗವಂತ ನೀಡಿದ ವಾಣಿಯಾಗಿದೆ. ಸ್ವದೇಶಿ ಜೀವನ ಹಾಗೂ ಸ್ವದೇಶಿ ಚಿಂತನೆಯಿಂದ ನಾಡು ಸಮೃದ್ಧಿಯಾಗಲಿದೆ ಎಂಬುದು ಈ ವರ್ಷದ ಕಾರ್ಣಿಕೆಯ ತಾತ್ಪರ್ಯವಾಗಿದೆ’ ಎಂದು ತಿಳಿಸಿದೆ.
‘ನಾಡಿನ ಬಂಗಾರದ ಗಿಂಡಿ’ ಎಂದರೆ ಭಾರತದ ಜ್ಞಾನ ಪರಂಪರೆ, ತತ್ವ, ಧರ್ಮ, ಸಣ್ಣ ಕೈಗಾರಿಕೆ, ಕರಕುಶಲತೆ, ಸ್ವದೇಶಿ ತಂತ್ರಜ್ಞಾನ ಎಂದು ಭಾವಿಸಬಹುದು. ‘ನಾಡಿಗೆ ಸಿರಿಯಾಯಿತಲೇ ಪರಾಕ್’ ಎಂದರೆ, ಈ ಮೇಲಿನ ಎಲ್ಲ ತತ್ವಗಳಿಂದ ಭಾರತ (ನಾಡು) ಸಿರಿಯಾಗಲಿದೆ. ಭಾರತ ಸ್ವಾವಲಂಬಿ ದೇಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಅರ್ಥೈಸಿಕೊಳ್ಳಬಹುದು’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.