ಹಾವೇರಿ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‘ಕಿಸಾನ್ ಸಮ್ಮಾನ್’ ಯೋಜನೆಯಡಿ ₹1 ಸಾವಿರ ಕೋಟಿಯನ್ನು ಬಿಡುಗಡೆ ಮಾಡಿದ್ದು, 50 ಲಕ್ಷ ರೈತರು ಪ್ರಯೋಜನ ಪಡೆಯಲಿದ್ದಾರೆ. ಪ್ರತಿಯೊಬ್ಬ ರೈತರ ಖಾತೆಗೆ ಹಣ ಹಾಕುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಶನಿವಾರ ಬೆಳೆ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳೆ ಸಮೀಕ್ಷೆಯಲ್ಲಿ ಕೆಲವು ವ್ಯತ್ಯಾಸವಾದ ಕಾರಣ 2019–20ನೇ ಸಾಲಿನಲ್ಲಿ ‘ಬೆಳೆ ವಿಮೆ’ ಹಣ ಕೆಲವು ರೈತರಿಗೆ ಸಿಕ್ಕಿರಲಿಲ್ಲ. ಈಗ ಎಲ್ಲ ಸಮಸ್ಯೆಗಳು ನಿವಾರಣೆಯಾಗಿದ್ದು, ಮಂಗಳವಾರದಿಂದ ‘ಬೆಳೆ ವಿಮೆ’ಯ ಸಂಪೂರ್ಣ ಹಣ ರೈತರ ಖಾತೆಗೆ ನೇರವಾಗಿ ಹೋಗಲಿದೆ ಎಂದು ತಿಳಿಸಿದರು.
2015–16ನೇ ಸಾಲಿನಲ್ಲಿ ಮೋಟೆಬೆನ್ನೂರು ಮತ್ತು ಬ್ಯಾಡಗಿಯಲ್ಲಿ ಕಾರಣಾಂತರದಿಂದ ಒಟ್ಟು ₹7.18 ಕೋಟಿ ‘ಬೆಳೆ ವಿಮೆ’ ರೈತರಿಗೆ ತಲುಪದೇ ಬಾಕಿ ಉಳಿದಿತ್ತು. ಸಚಿವನಾದ ಮೇಲೆ ರೈತಸಂಘದ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಂಡೆ. ಹಣಕಾಸು ಇಲಾಖೆಯಿಂದ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ₹1.92 ಲಕ್ಷಕ್ಕೆ ಸಂಬಂಧಿಸಿದಂತೆ ಕೃಷಿ ವಿಮಾ ಕಂಪನಿಯೊಂದು ಪ್ರಕರಣ ದಾಖಲಿಸಿತ್ತು. ಈಗ ಪ್ರಕರಣವನ್ನು ಕಂಪನಿ ಹಿಂತೆಗೆದುಕೊಂಡಿದೆ. ನ್ಯಾಯಾಲಯದ ಆದೇಶ ಬಂದ ತಕ್ಷಣ ಬೆಳೆ ವಿಮೆ ಹಣ ರೈತರ ಕೈ ಸೇರಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.