ADVERTISEMENT

ಕೆಎಂಎಫ್‌ ಧಾರವಾಡ ಘಟಕದ ಖರೀದಿ ಬಂದ್

ಜಿಲ್ಲೆಯ 12 ಕಡೆ ಮೆಕ್ಕೆಜೋಳ ಖರೀದಿ ಕೇಂದ್ರ | ಎರಡನೇ ದಿನದ ಅಂತ್ಯಕ್ಕೆ 1,698 ನೋಂದಣಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 2:18 IST
Last Updated 6 ಡಿಸೆಂಬರ್ 2025, 2:18 IST
ಹಾವೇರಿಯಲ್ಲಿ ತೆರೆಯಲಾದ ಕೆಎಂಎಫ್‌ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ರೈತರು ಶುಕ್ರವಾರ ನೋಂದಣಿ ಮಾಡಿಸಿದರು
ಹಾವೇರಿಯಲ್ಲಿ ತೆರೆಯಲಾದ ಕೆಎಂಎಫ್‌ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ರೈತರು ಶುಕ್ರವಾರ ನೋಂದಣಿ ಮಾಡಿಸಿದರು   

ಹಾವೇರಿ: ಜಿಲ್ಲೆಯ 12 ಕಡೆಗಳಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲಾಗಿದ್ದು, ಶುಕ್ರವಾರದ ಅಂತ್ಯಕ್ಕೆ 1,698 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಆರಂಭವಾದ ಎರಡನೇ ದಿನವೇ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಧಾರವಾಡ ಪಶು ಆಹಾರ ತಯಾರಿಕಾ ಘಟಕದ ಖರೀದಿ ಬಂದ್ ಆಗಿದೆ.

ಕೇಂದ್ರ ಸರ್ಕಾರ ನಿಗದಿಪಡಿಸಿರುವ ₹ 2,400 ಬೆಲೆಯಲ್ಲಿ ಪ್ರತಿ ಎಕರೆಗೆ ಗರಿಷ್ಠ 12 ಕ್ವಿಂಟಲ್ ಹಾಗೂ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರನ್ವಯ ಜಿಲ್ಲೆಯಲ್ಲಿ ತೆರೆದಿರುವ ಖರೀದಿ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ರೈತರು ನೋಂದಣಿ ಮಾಡಿಸುತ್ತಿದ್ದಾರೆ.

‘ಕ್ವಿಂಟಲ್‌ಗೆ ₹3,000 ಬೆಲೆ ನೀಡಬೇಕು’ ಎಂದು ಒತ್ತಾಯಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದಿಂದ ಡಿ.8ರಂದು ಪ್ರತಿಭಟನೆಗೆ ಕರೆ ನೀಡಲಾಗಿದೆ. ಅಂದು ಮೊಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆಯಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕೆಲ ರೈತರು, ‘ಮೆಕ್ಕೆಜೋಳ ಹೋದಷ್ಟು ಹೋಗಲಿ’ ಎಂದು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ.

ADVERTISEMENT

ಡಿ.4ರಿಂದ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನವೇ 572 ರೈತರು ನೋಂದಣಿ ಮಾಡಿಕೊಂಡಿದ್ದರು. ಎರಡನೇ ದಿನವಾದ ಶುಕ್ರವಾರದ ಅಂತ್ಯಕ್ಕೆ ನೋಂದಾಯಿತ ರೈತರ ಸಂಖ್ಯೆ 1,698 ಆಗಿದೆ.

ಕೆಎಂಎಫ್‌ನ ಧಾರವಾಡ ಪಶು ಆಹಾರ ತಯಾರಿಕಾ ಘಟಕಕ್ಕೆ 20,000 ಮೆಟ್ರಿಕ್ ಟನ್‌ ಮೆಕ್ಕೆಜೋಳ ಖರೀದಿಸಲು ತೀರ್ಮಾನಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆಗೆ, ರೈತರಿಂದ 20,000 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ನೋಂದಣಿ ಮುಕ್ತಾಯಗೊಂಡಿದೆ. ಧಾರವಾಡ ಘಟಕಕ್ಕೆ ಹೆಚ್ಚುವರಿ ಮೆಕ್ಕೆಜೋಳ ಖರೀದಿಸಲು ಅವಕಾಶ ಇಲ್ಲದಂತಾಗಿದೆ. ಹೀಗಾಗಿ, ನೋಂದಣಿ ಪ್ರಕ್ರಿಯೆಯಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಹಾವೇರಿ ಹಾಲು ಒಕ್ಕೂಟದ ಆಡಳಿತ ಕಚೇರಿ, ರಾಣೆಬೆನ್ನೂರಿನ ಎಪಿಎಂಸಿ ಸಮುದಾಯ ಭವನ, ಶಿಗ್ಗಾವಿಯ ಎಪಿಎಂಸಿ ಕೆಎಂಎಫ್‌ ಉಪಕಚೇರಿ, ಹಿರೇಕೆರೂರಿನ ಕೆಎಂಎಫ್‌ ಶಿಥಲೀಕರಣ ಕೇಂದ್ರ, ಹಾನಗಲ್‌ನ ಆಡೂರು ಹಾಲು ಉತ್ಪಾದಕರ ಸಂಘಗಳಲ್ಲಿ ಕೆಎಂಎಫ್‌ ಕಡೆಯಿಂದ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಶುಕ್ರವಾರದ ಅಂತ್ಯಕ್ಕೆ 1,310 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

‘ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳಿಂದ ಧಾರವಾಡ ಘಟಕಕ್ಕೆ ಮೆಕ್ಕೆಜೋಳ ಖರೀದಿಸಲು ತೀರ್ಮಾನಿಸಲಾಗಿತ್ತು. ಎಲ್ಲ ಜಿಲ್ಲೆಗಳಿಂದಲೂ ರೈತರು ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಸಿದ್ದಾರೆ. ಹೀಗಾಗಿ, ನಿಗದಿಯಂತೆ 20 ಕ್ವಿಂಟಲ್ ಮೆಕ್ಕೆಜೋಳ ಲಭ್ಯವಾಗಿದೆ’ ಎಂದು ಕೆಎಂಎಫ್‌ ಅಧಿಕಾರಿಯೊಬ್ಬರು ಹೇಳಿದರು.

‘ಧಾರವಾಡ ಘಟಕದ ಖರೀದಿ ಬಂದ್ ಆಗಿದ್ದು, ಶಿಕಾರಿಪುರದ ಘಟಕದ ಖರೀದಿ ಮುಂದುವರಿದಿದೆ. ಶಿವಮೊಗ್ಗ, ದಾವಣಗೇರಿ, ಹಾವೇರಿ ಹಾಗೂ ದಕ್ಷಣ ಕನ್ನಡ ಜಿಲ್ಲೆಗಳಿಂದ ಶಿಕಾರಿಪುರ ಘಟಕಕ್ಕೆ 15,000 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕಿದೆ. ಶುಕ್ರವಾರವೂ ಹಲವು ರೈತರು ಶಿಕಾರಿಪುರ ಘಟಕಕ್ಕೆ ಮೆಕ್ಕೆಜೋಳ ನೀಡಲು ನೋಂದಣಿ ಮಾಡಿಕೊಂಡಿದ್ದಾರೆ’ ಎಂದರು.

ಜಿಲ್ಲಾಡಳಿತದ ಕೇಂದ್ರಗಳಲ್ಲಿ 388 ನೋಂದಣಿ: ಹಾವೇರಿ ತಾಲ್ಲೂಕಿನ ಗುತ್ತಲ, ಹಾವನೂರು, ನೆಗಳೂರು, ರಾಣೆಬೆನ್ನೂರು ತಾಲ್ಲೂಕಿನ ಕರೂರ, ಇಟಗಿ ಹಾಗೂ ಕಮದೊಂಡದಲ್ಲಿ ಜಿಲ್ಲಾಡಳಿತದಿಂದ ಖರೀದಿ ಕೇಂದ್ರ ತೆರೆಯಲಾಗಿದೆ. ಈ ಏಳು ಕೇಂದ್ರಗಳಲ್ಲಿ 388 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಬೀರಪ್ಪ ಡೊಳ್ಳಿನ
ಮಾಲತೇಶ ಬಿಸಲಹಳ್ಳಿ

4 ಎಕರೆ ಜಮೀನಿನಲ್ಲಿ ಸುಮಾರು 80 ಕ್ವಿಂಟಲ್‌ ಮೆಕ್ಕೆಜೋಳವಿದೆ. 20 ಕ್ವಿಂಟಲ್ ಮಾತ್ರ ಖರೀದಿಸುವುದಾಗಿ ಹೇಳುತ್ತಿದ್ದಾರೆ. ಉಳಿದ ಮೆಕ್ಕೆಜೋಳ ಏನು ಮಾಡುವುದು? ಸರ್ಕಾರ ಎಲ್ಲ ಮೆಕ್ಕೆಜೋಳ ಖರೀದಿಸಬೇಕು

-ಮಾಲತೇಶ ಬಿಸಲಹಳ್ಳಿ ಹೆಡಿಗೊಂಡ ರೈತ

20 ಕ್ವಿಂಟಲ್ ಮೆಕ್ಕೆಜೋಳವನ್ನು ಹಾವೇರಿಯಿಂದ ಧಾರವಾಡಕ್ಕೆ ಕೊಂಡೊಯ್ಯುವುದು ಹೊರೆಯಾಗುತ್ತದೆ. ಹಾವೇರಿಯಲ್ಲಿಯೇ ಮೆಕ್ಕೆಜೋಳ ಖರೀದಿಸಲು ವ್ಯವಸ್ಥೆ ಮಾಡಬೇಕು

-ಬೀರಪ್ಪ ಡೊಳ್ಳಿನ ಯಲಗಚ್ಛ ರೈತ

‘ಹಾವೇರಿಯಲ್ಲೇ ಖರೀದಿಸಿ’

‘₹2400 ದರದಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಿರುವುದು ಸಮಾಧಾನಕರ ಸಂಗತಿ. ಆದರೆ ಹಾವೇರಿಯಲ್ಲಿಯೇ ಮೆಕ್ಕೆಜೋಳವನ್ನು ಖರೀದಿಸಬೇಕು. ಅದನ್ನು ಬಿಟ್ಟು ಧಾರವಾಡ ಹಾಗೂ ಶಿಕಾರಿಪುರದ ಘಟಕಕ್ಕೆ ಹೋಗಿ ಮೆಕ್ಕೆಜೋಳ ನೀಡಬೇಕೆಂದು ಹೇಳಿದರೆ ಮತ್ತಷ್ಟು ಆರ್ಥಿಕ ಹೊರೆಯಾಗುತ್ತದೆ’ ಎಂದು ರೈತರು ಅಳಲು ತೋಡಿಕೊಂಡರು. ‘ಕೇವಲ 20 ಕ್ವಿಂಟಲ್ ಖರೀದಿಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಹಾವೇರಿಯಿಂದ ಧಾರವಾಡಕ್ಕೆ ಒಂದು ಕ್ವಿಂಟಲ್‌ ಮೆಕ್ಕೆಜೋಳವನ್ನು ಕೊಂಡೊಯ್ಯಲು ವಾಹನದವರು ₹ 200ರಿಂದ ₹ 250 ತೆಗೆದುಕೊಳ್ಳುತ್ತಾರೆ. ಸರ್ಕಾರ ನೀಡುವ ಬೆಲೆಯಲ್ಲಿ ₹250 ಸಾಗಣೆಗೆ ಹೋಗುತ್ತದೆ. ಜೊತೆಗೆ ಚೀಲ ತುಂಬಲು ಹಾಗೂ ಹಮಾಲಿ ಕೆಲಸಕ್ಕೂ ಹಣ ಹೋಗುತ್ತದೆ. ಖರ್ಚು ಕಳೆದು ರೈತರಿಗೆ ಏನು ಉಳಿಯುವುದಿಲ್ಲ’ ಎಂದರು. ‘ಧಾರವಾಡ ಶಿಕಾರಿಪುರ ಯಾವುದೇ ಘಟಕವಿರಲಿ ಹಾವೇರಿಯಲ್ಲಿಯೇ ಗೋದಾಮು ತೆರೆದು ಮೆಕ್ಕೆಜೋಳ ಖರೀದಿಸಬೇಕು. ಇದರಿಂದ ರೈತರಿಗೆ ಸ್ವಲ್ಪ ಹಣ ಹಾಗೂ ಸಮಯ ಎರಡೂ ಉಳಿತಾಯವಾಗಲಿದೆ’ ಎಂದು ರೈತರು ಆಗ್ರಹಿಸಿದರು.

ಶಾಸಕರ ಜೊತೆಗಿನ ಸಂಧಾನ ವಿಫಲ

ಹಾವೇರಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶಾಸಕರ ಜೊತೆಗೆ ರೈತರು ನಡೆಸಿದ್ದ ಸಂಧಾನ ವಿಫಲವಾಗಿದೆ. ಡಿ.8ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಯುವುದಾಗಿ ರೈತರು ಘೋಷಿಸಿದ್ದಾರೆ. ಶಾಸಕರಾದ ಬಸವರಾಜ ಶಿವಣ್ಣನವರ ರುದ್ರಪ್ಪ ಲಮಾಣಿ ಶ್ರೀನಿವಾಸ ಮಾನೆ ಯು.ಬಿ. ಬಣಕಾರ ಸಭೆಯಲ್ಲಿದ್ದರು. ‘ರೈತರಿಂದ 100 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕು. ₹3000 (ಕೇಂದ್ರದಿಂದ ₹2400 ಹಾಗೂ ರಾಜ್ಯದಿಂದ ₹ 600) ಬೆಲೆ ನೀಡಬೇಕು. ಹೋಬಳಿಮಟ್ಟದಲ್ಲಿ ಖರೀದಿ ಕೇಂದ್ರ ತೆರೆದು ಅಲ್ಲಿಯೇ ಮೆಕ್ಕೆಜೋಳ ಖರೀದಿಸಬೇಕು’ ಎಂದು ರೈತರು ಆಗ್ರಹಿಸಿದರು. ಇದಕ್ಕೆ ಶಾಸಕರು ಸ್ಪಂದಿಸದಿದ್ದರಿಂದ ರೈತರು ಸಭೆಯಿಂದ ಹೊರಗೆ ಬಂದರು. ‘ಮೋಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಿ ಅಲ್ಲಿಯೇ ಅಹೋರಾತ್ರಿ ಧರಣಿ ನಡೆಸುತ್ತೇವೆ’ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.