ADVERTISEMENT

ಶಿಗ್ಗಾವಿ: ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 11:44 IST
Last Updated 5 ಮಾರ್ಚ್ 2024, 11:44 IST
ಶಿಗ್ಗಾವಿ ತಾಲ್ಲೂಕಿನ ಗುಡ್ಡದಚನ್ನಾಪುರ ಗ್ರಾಮದಲ್ಲಿ ಸೋಮವಾರ ಕೊಟ್ಟೂರ ಗುರುಬಸವೇಶ್ವರ ಸ್ವಾಮಿ ಮಹಾ ರಥೋತ್ಸವ ಜರುಗಿತು
ಶಿಗ್ಗಾವಿ ತಾಲ್ಲೂಕಿನ ಗುಡ್ಡದಚನ್ನಾಪುರ ಗ್ರಾಮದಲ್ಲಿ ಸೋಮವಾರ ಕೊಟ್ಟೂರ ಗುರುಬಸವೇಶ್ವರ ಸ್ವಾಮಿ ಮಹಾ ರಥೋತ್ಸವ ಜರುಗಿತು   

ಶಿಗ್ಗಾವಿ: ತಾಲ್ಲೂಕಿನ ಗುಡ್ಡದಚನ್ನಾಪುರ ಗ್ರಾಮದಲ್ಲಿ ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಮಹಾ ರಥೋತ್ಸವ ಸುತ್ತಲಿನ ಗ್ರಾಮಗಳ ಭಕ್ತ ಸಮೂಹದ ನಡುವೆ ಸಡಗರ, ಸಂಭ್ರಮದಿಂದ ಜರುಗಿತು.

ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯು ವಿವಿಧ ರಸ್ತೆಗಳ ಮೂಲಕ ಸಾಗಿತು. ಜಾಂಜ್‌ ಮೇಳ, ಡೊಳ್ಳು ಮೇಳ, ಪುರವಂತರಿಂದ ವೀರಭದ್ರ ದೇವರ ಪೌರಾಣಿಕ ಹಿನ್ನೆಲೆಯ ರೂಪದರ್ಶಿಕೆಯೊಂದಿಗೆ ಸಂಚರಿಸಿತು. ರಥೋತ್ಸವಕ್ಕೆ ಮಹಿಳೆಯರು, ಮಕ್ಕಳು ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯ ಹರಕೆ ತೀರಿಸಿದರು. ನೂತನವಾಗಿ ವಿವಾಹವಾದ ಜೋಡಿಗಳು ವಿಶೇಷವಾಗಿ ಜಾತ್ರಾ ಮಹೋತ್ಸವದಲ್ಲಿ ಗಮನ ಸೆಳೆದರು.

ರಥೋತ್ಸವದ ಸ್ವಾಗತಕ್ಕಾಗಿ ಗ್ರಾಮದ ಎಲ್ಲ ಬೀದಿಗಳನ್ನು ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ಕೊಟ್ಟೂರು ಗುರು ಬಸವೇಶ್ವರ ದೇವಸ್ಥಾನದ ಸೇವಾ ಸಮಿತಿ ಸದಸ್ಯರಿಂದ ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಅನ್ನಪ್ರಸಾದದ ಸೇವೆ ನಡೆಯಿತು.

ADVERTISEMENT

ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಟಿ.ಎಸ್.ಮರಿಗೌಡ್ರ, ಉಪಾಧ್ಯಕ್ಷ ಶಿವನಗೌಡ ಮರಿಗೌಡ್ರ, ಈರಯ್ಯ ಗುಡ್ಡದಮಠ, ಬಸವನಗೌಡ ಮಾಜಿಗೌಡ್ರ, ವಿರೂಪಾಕ್ಷಗೌಡ ಮಾಜಿಗೌಡ್ರ, ರುದ್ರಗೌಡ ಮರಿಗೌಡ್ರ, ಶಂಭು ಮೇಲಿನಮಠ, ಷಣ್ಮುಖ ಕಾಳಣ್ಣವರ, ಶಂಭಣ್ಣ ಕಡಕೋಳ, ಫಕ್ಕೀರೇಶ ಹಳ್ಳಪ್ಪನವರ, ವೀರೇಶ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.