ADVERTISEMENT

ರಟ್ಟೀಹಳ್ಳಿ | ಕಾರ್ಮಿಕರ ಮಕ್ಕಳಿಗೆ ತಲುಪದ ಶೈಕ್ಷಣಿಕ ಕಿಟ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 18:29 IST
Last Updated 26 ಆಗಸ್ಟ್ 2023, 18:29 IST
ರಟ್ಟೀಹಳ್ಳಿ ತಾಲ್ಲೂಕಿನ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ಸರ್ಕಾರದಿಂದ ಬಂದಿರುವ ಶೈಕ್ಷಣಿಕ ಕಿಟ್‌ಗಳು ಎರಡು ತಿಂಗಳುಗಳಿಂದ ವಿತರಣೆಯಾಗದೆ ಮೂಲೆಗುಂಪಾಗಿರುವುದು
ರಟ್ಟೀಹಳ್ಳಿ ತಾಲ್ಲೂಕಿನ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ಸರ್ಕಾರದಿಂದ ಬಂದಿರುವ ಶೈಕ್ಷಣಿಕ ಕಿಟ್‌ಗಳು ಎರಡು ತಿಂಗಳುಗಳಿಂದ ವಿತರಣೆಯಾಗದೆ ಮೂಲೆಗುಂಪಾಗಿರುವುದು   

ರಟ್ಟೀಹಳ್ಳಿ: ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಸರ್ಕಾರದಿಂದ ಕೊಡಲ್ಪಟ್ಟಿರುವ ಶೈಕ್ಷಣಿಕ ಸಾಮಗ್ರಿಗಳ ಕಿಟ್ ಇದುವರೆಗೂ ಇಲಾಖಾ ಅಧಿಕಾರಿಗಳು ತಲುಪಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕಾರ್ಮಿಕ ಸಂಘಟನೆಗಳು ದೂರಿವೆ.

ಕಳೆದ ಎರಡು ತಿಂಗಳಿನಿಂದಲೂ ಈ ಕಿಟ್‌ಗಳು ಕಚೇರಿಯಲ್ಲಿಯೇ ಕೊಳೆಯುತ್ತಿವೆ. ರಟ್ಟೀಹಳ್ಳಿ ತಾಲ್ಲೂಕಿಗೆ 187 ಶೈಕ್ಷಣಿಕ ಸಾಮಗ್ರಿಗಳ ಕಿಟ್ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 6 ರಿಂದ 8ನೇ ತರಗತಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲು ಪೂರೈಕೆಯಾಗಿರುತ್ತವೆ. ಆದರೆ ಶಾಲೆ ಜೂನ್ ತಿಂಗಳಲ್ಲಿ ಪ್ರಾರಂಭವಾಗಿದ್ದು, ಇದುವರೆಗೂ ಕಿಟ್‌ಗಳನ್ನು ವಿತರಿಸದೆ ರಟ್ಟೀಹಳ್ಳಿ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಕೊಳೆಯುತ್ತಿವೆ.

ಕಾರ್ಮಿಕ ಇಲಾಖೆ ಕಾರ್ಮಿಕರ ಮಕ್ಕಳಿಗೆ ಕೊರತೆಯಾಗದಂತೆ ಸಮರ್ಪಕವಾಗಿ ಕಿಟ್‌ ವಿತರಿಸಬೇಕು.
ಶಿವಕುಮಾರ ಉಪ್ಪಾರ, ಅಧ್ಯಕ್ಷ ,ಹಿಂದುಳಿದ ಜನಾಂಗ ಜಾಗೃತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ

‘ರಟ್ಟೀಹಳ್ಳಿ ತಾಲ್ಲೂಕಿನ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ಕಿಟ್‌ ಕೊರತೆಯಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇಲಾಖೆಯವರು ನೋಂದಾಯಿತ ಕಟ್ಟಡ ಕಾರ್ಮಿಕರ ಎಲ್ಲ ಅರ್ಹ ಬಡ ಮಕ್ಕಳಿಗೂ ಶೈಕ್ಷಣಿಕ ಕಿಟ್‌ ವಿತರಿಸಲು ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಅಖಿಲ ಕರ್ನಾಟಕ ಹಿಂದುಳಿದ ಜನಾಂಗ ಜಾಗೃತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಶಿವಕುಮಾರ ಉಪ್ಪಾರ.

ADVERTISEMENT
ಶಿಷ್ಯವೇತನಕ್ಕೆ ಅರ್ಜಿ ಹಾಕಿದ ಮಕ್ಕಳ ಮಾಹಿತಿ ಪಟ್ಟಿಯನ್ನು ತಾಲ್ಲೂಕು ಕಾರ್ಮಿಕ ಇನ್‌ಸ್ಪೆಕ್ಟರ್‌ ಅವರಿಂದ ತರಿಸಿಕೊಂಡು ಸಧ್ಯದಲ್ಲಿಯೇ ಶೈಕ್ಷಣಿಕ ಕಿಟ್ ವಿತರಿಸಲಾಗುವುದು
ಮಹೇಶ ಕೊಳಲಿ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ

‘ಸರ್ಕಾರದ ಆದೇಶದಂತೆ 8ನೇ ತರಗತಿ ಓದುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಿಸಲು ಸೂಚಿಸಿದ್ದು, ಕಿಟ್‌ಗಳು ಉಳಿದರೆ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲು ತಿಳಿಸಿದ್ದಾರೆ. ಸದ್ಯ 8ನೇ ತರಗತಿ ಮಕ್ಕಳಿಗೆ ವಿತರಿಸಲು ಕಿಟ್ ಕೊರತೆ ಇದೆ. ಹೀಗಾಗಿ 6 ಮತ್ತು 7ನೇ ತರಗತಿ ಮಕ್ಕಳಿಗೆ ವಿತರಿಸುವ ಪ್ರಶ್ನೆ ಸದ್ಯ ಉದ್ಭವಿಸುವುದಿಲ್ಲ. ಶಿಷ್ಯವೇತನಕ್ಕೆ ಅರ್ಜಿ ಹಾಕಿದ ಮಕ್ಕಳ ಮಾಹಿತಿ ಪಟ್ಟಿಯನ್ನು ತಾಲ್ಲೂಕು ಕಾರ್ಮಿಕ ಇನ್‌ಸ್ಪೆಕ್ಟರ್‌ ಅವರಿಂದ ತರಿಸಿಕೊಂಡು ಸಧ್ಯದಲ್ಲಿಯೇ ಶೈಕ್ಷಣಿಕ ಕಿಟ್ ವಿತರಿಸಲು ಕ್ರಮಕೈಗೊಳ್ಳಲಾಗುವುದು’ ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕೊಳಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.