
ಹಾವೇರಿ: ‘ಹಾವೇರಿಯಲ್ಲಿ ಫೆ. 13ರಂದು ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಜರುಗಲಿದೆ. ಇದೇ ಸಂದರ್ಭದಲ್ಲಿ ಜಿಲ್ಲೆಯ 30 ಸಾವಿರ ಸೇರಿದಂತೆ ರಾಜ್ಯದ 1 ಲಕ್ಷ ಜನರಿಗೆ ಹಕ್ಕು ಪತ್ರ, ಇ–ಪಾವತಿ ಮತ್ತು ಬಗರ್ಹುಕುಂ ಸಾಗುವಳಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಹೊರವಲಯದಲ್ಲಿರುವ ಅಜ್ಜಯ್ಯ ದೇವಸ್ಥಾನ ಬಳಿ ಸಮಾವೇಶ ನಡೆಯಲಿದ್ದು, ಭಾನುವಾರ ಜಾಗದ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
‘ಜಿಲ್ಲೆಯಲ್ಲಿ ಇದುವರೆಗೂ 65 ಸಾವಿರ ಹಕ್ಕು ಪತ್ರಗಳಿಗೆ ಅನುಮೋದನೆ ದೊರೆತಿದೆ. ಜಿಲ್ಲೆಯ 20 ಸಾವಿರ ಜನರಿಗೆ ಕಂದಾಯ ಹಕ್ಕು ಪತ್ರ ಹಾಗೂ 10 ಸಾವಿರ ಜನರಿಗೆ ಇ–ಪಾವತಿ ಹಾಗೂ ಇತರೆ ದಾಖಲೆಗಳನ್ನು ವಿತರಣೆ ಮಾಡಲಾಗುವುದು’ ಎಂದರು.
‘ಕಂದಾಯ ಗ್ರಾಮದ ಹಕ್ಕು ಪತ್ರ, ಇ–ಪಾವತಿ ಖಾತೆ, ದರಖಾಸ್ತು ಪೋಡಿ, ಬಗರ್ ಹುಕುಂ ಹಕ್ಕುಪತ್ರ ವಿತರಣೆ ಹಾಗೂ ಪೋಡಿಮುಕ್ತ ಗ್ರಾಮ ಅಭಿಯಾನ ನಡೆಯಲಿದೆ. ರಾಜ್ಯದಲ್ಲಿ ಒಂದು ಲಕ್ಷ ಕಂದಾಯ ಗ್ರಾಮ ಹಕ್ಕು ಪತ್ರ (94 ಡಿ) ವಿತರಣೆಯ ಗುರಿ ಹೊಂದಲಾಗಿದೆ. ಹಾವೇರಿ ಜಿಲ್ಲೆಯ 31 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದು, ಅದರಲ್ಲಿ 21 ಸಾವಿರ ಕಂದಾಯ ಗ್ರಾಮ ಹಕ್ಕು ಪತ್ರ ನೀಡಲಾಗುತ್ತದೆ’ ಎಂದು ವಿವರಿಸಿದರು.
‘ಸಾಧನಾ ಸಮಾವೇಶದ ಸಿದ್ಧತೆ ಹಾಗೂ ಸವಲತ್ತುಗಳ ವಿತರಣೆ ಬಗ್ಗೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಆನ್ಲೈನ್ ಸಭೆ ಆಯೋಜನೆ ಮಾಡಲಾಗಿದೆ. ಆನ್ಲೈನ್ಗಿಂತ ನೇರವಾಗಿ ಸಭೆ ನಡೆಸುವುದು ಹೆಚ್ಚು ಪರಿಣಾಮಕಾರಿಯಾಗಿದ್ದು, ಮತ್ತೊಮ್ಮೆ ಸಭೆ ಆಯೋಜನೆ ಮಾಡುವ ಉದ್ದೇಶವಿದೆ’ ಎಂದು ಹೇಳಿದರು.
ಸುಸಜ್ಜಿತ ವೇದಿಕೆ ನಿರ್ಮಿಸಿ: ‘ಸಮಾವೇಶ ನಡೆಯುವ ವೇದಿಕೆಯನ್ನು ತ್ವರಿತವಾಗಿ ನಿರ್ಮಿಸಬೇಕು. ವಿಳಂಬವಾದರೆ ಕೊನೆಯ ಹಂತದಲ್ಲಿ ಸಮಸ್ಯೆಯಾಗಬಹುದು. ಹೀಗಾಗಿ ಬೇಗ ಎಲ್ಲ ಕೆಲಸ ಶುರು ಮಾಡಿ ಮುಗಿಸಬೇಕು’ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ದ್ವಿಚಕ್ರವಾಹನ ಮತ್ತಿತರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಗಣ್ಯರು, ಅತಿ ಗಣ್ಯರ ವಾಹನಗಳಿಗೆ ಪ್ರತ್ಯೇಕ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ವೇದಿಕೆಯ ಸಮೀಪದಲ್ಲೇ ಗಣ್ಯರ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡುವುದು ಸೂಕ್ತ’ ಎಂದು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.