
ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ತಾಲ್ಲೂಕಿನ ಕಡೂರು ಗ್ರಾಮದ ಹೊರವಲಯದ ತಡಕಲಿಮಟ್ಟಿ ಗುಡ್ಡದ ಜಮೀನಿನಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ನಾಲ್ಕು ವರ್ಷದ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿದೆ.
ತಾಲ್ಲೂಕಿನ ಕಣವಿಶಿದ್ಗೇರಿ ಗ್ರಾಮದ ಜಮೀನುವೊಂದರಲ್ಲಿ ಕಳೆದ ತಿಂಗಳು ಚಿರತೆ ದಾಳಿಯಿಂದ ರೈತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಬೋನು ಇಟ್ಟಿತ್ತು.
‘ಮಂಗಳವಾರ ಮಧ್ಯರಾತ್ರಿ ಚಿರತೆ ಸಿಕ್ಕಿದೆ. ಇನ್ನಷ್ಟು ಚಿರತೆಗಳು ಇರುವ ಬಗ್ಗೆ ಅನುಮಾನವಿದೆ. ಸೆರೆ ಸಿಕ್ಕಿರುವ ಚಿರತೆಯನ್ನು ಭದ್ರಾ ಸಂರಕ್ಷಿತ ಅರಣ್ಯ ವಲಯಕ್ಕೆ ಬಿಡಲಾಗುವುದು’ ಎಂದು ಹಿರೇಕೆರೂರ ವಲಯ ಅರಣ್ಯಾಧಿಕಾರಿ ವಿಜಯಕುಮಾರ ತಿಳಿಸಿದರು.
‘ಕಡೂರು, ಕುಡುಪಲಿ, ಹಾಡೇ, ಬುಳ್ಳಾಪುರ, ಜೋಕನಾಳ, ಪರ್ವತಶಿದ್ಗೇರಿ, ಕಣವಿಶಿದ್ಗೇರಿ ಗ್ರಾಮಗಳ ಸುತ್ತಮುತ್ತ ಇನ್ನೂ ಅನೇಕ ಚಿರತೆಗಳು ಇರುವುದನ್ನು ರೈತರು ಗಮನಿಸಿದ್ದಾರೆ. ಅರಣ್ಯ ಸಿಬ್ಬಂದಿ ಇನ್ನೂ ಹೆಚ್ಚಿನ ನುರಿತ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಮಾಡವುದು ಅವಶ್ಯ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಂಕರಗೌಡ ಶಿರಗಂಬಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.