ADVERTISEMENT

‘ಮೀಸಲಾತಿಯ ಮಾತು ಉಳಿಸಿಕೊಳ್ಳಲಿ’

ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಫೆ.8,9ರಂದು

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 17:37 IST
Last Updated 2 ಜನವರಿ 2021, 17:37 IST
ಹಾವೇರಿ ನಗರದಲ್ಲಿ ಶನಿವಾರ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿದರು
ಹಾವೇರಿ ನಗರದಲ್ಲಿ ಶನಿವಾರ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿದರು   

ಹಾವೇರಿ: ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ 3ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ, ಮಠದ 23ನೇ ವಾರ್ಷಿಕೋತ್ಸವ, ಪುಣ್ಯಾನಂದಪುರಿ ಶ್ರೀಗಳ 13ನೇ ವರ್ಷದ ಪುಣ್ಯಾರಾಧನೆ, ಪ್ರಸನ್ನಾನಂದ ಶ್ರೀಗಳ 13ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಫೆ.8,9ರಂದು ನಡೆಯಲಿದೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶನಿವಾರ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಅವರು 2ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ನೀಡಿದ ಭರವಸೆಯಂತೆ ವಾಲ್ಮೀಕಿ ಸಮಾಜಕ್ಕೆ ಶೇ7.5ರಷ್ಟು ಮೀಸಲಾತಿಯನ್ನು ಘೋಷಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲದೇ ಹೋದರೆ ಸರ್ಕಾರದ ವಿರುದ್ಧ‌ ಸಂಘರ್ಷಕ್ಕಿಳಿಯುವುದು ಶತಃಸಿದ್ಧ. ಹೋರಾಟಕ್ಕೆ ಸಮಾಜದ ಜನ ಸಿದ್ಧರಾಗುವುದು ಅನಿವಾರ್ಯ’ ಎಂದರು.

ADVERTISEMENT

‘ಸರ್ಕಾರ ನೀಡಿರುವ ಭರವಸೆ ಇಲ್ಲಿಯ ವರೆಗೂ ಈಡೇರಿಲ್ಲ. ರಾಜ್ಯದಲ್ಲಿ ವಾಲ್ಮೀಕಿ ಸಮಾಜವು ನಾಲ್ಕನೇ ದೊಡ್ಡ ಸಮುದಾಯವಾಗಿದ್ದು, ವಾಲ್ಮೀಕಿ ಸಮಾಜಕ್ಕೆ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಶೇ 7.5ರಷ್ಟು ಮೀಸಲಾತಿ ನೀಡುವಂತೆ ಕಳೆದ ಮೂರುದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಚಿಸಲಾದ ನಾಗಮೋಹನದಾಸ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ವಾಲ್ಮೀಕಿ ಜಾತ್ರೆಗೂ ಮುನ್ನ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಕೆ.ಮಂಜಣ್ಣ, ಅಶೋಕ ತಳವಾರ, ಮಂಜುಳಾ ಕರಬಸಮ್ಮನವರ, ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಆವನಟ್ಟಿ ಮಾತನಾಡಿದರು.

ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಕೀಲ ಶೇಖರ ಕಳ್ಳಿಮನಿ, ತಾಲ್ಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಹರನಗಿರಿ, ಮುಖಂಡರಾದ ಶ್ರೀಧರ ದೊಡ್ಡಮನಿ, ಅನಿಲ ಕುಮಾರ ಮರೋಳ, ಪ್ರಮೋದ ನಲವಾಗಿಲ, ಡಾ.ರಮೇಶ ತೆವರಿ, ಶೇಖರ ಕರಬಸಮ್ಮನವರ, ಈಶಪ್ಪ ಭೀಮಕ್ಕನವರ, ಶಿವಪ್ಪ ಜವಳಿ, ಮಲ್ಲಿಕಾರ್ಜುನ ಬೂದಗಟ್ಟಿ, ಬಸವರಾಜ ತಡಸದ, ಬಸವರಾಜ ಭೀಮಕ್ಕನವರ, ಸಿ.ವಿ.ಬ್ಯಾಡಗಿ, ಮಾಲತೇಶ ಅಂಗೂರ, ಕೃಷ್ಟ ಜವಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.