
ತಡಸ: ದುಂಡಶಿ ಹೋಬಳಿಯ ರೈತರು ಮುಂಗಾರು ಬೆಳೆಯಾಗಿ ಮಳೆಯ ನಡುವೆ ಗೋವಿನಜೋಳವನ್ನು ಕಟಾವು ಮಾಡಿಸಿ ಮಾರಾಟ ಮಾಡಲು ಮುಂದಾದರೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಪಾತಳಕ್ಕೆ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ಇಷ್ಟಾದರೂ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಬೆಂಬಲ ಬೆಲೆಯಲ್ಲಿ ಭತ್ತ, ಹತ್ತಿ, ಸೋಯಾಬೀನ್, ಶೇಂಗಾ ಇವುಗಳನ್ನು ಬೆಂಬಲ ಬೆಲೆಗೆ ಖರೀದಿ ನಡೆದಿದ್ದು, ಆದರೆ, ಮೆಕ್ಕೆಜೋಳಕ್ಕೆ ಬರೋಬ್ಬರಿ ₹2400 ಘೋಷಣೆ ಮಾಡಿದೆ. ಖರೀದಿ ಮಾತ್ರ ಮಾಡುತ್ತಿಲ್ಲ. ಇಷ್ಟು ದರಕ್ಕೆ ಮಾರುಕಟ್ಟೆ ಸಿಕ್ಕರೆ ರೈತರ ಸಂತಸಕ್ಕೆ ಪಾರವೇ ಇರುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಅವಕ ಹೆಚ್ಚಳವಾಗಿದೆ ಎನ್ನುವ ಕಾರಣ ಮುಂದೆ ಮಾಡಿ, ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಮೆಕ್ಕೆಜೋಳ ಬೆಲೆ ಪಾತಾಳಕ್ಕೆ ಇಳಿಸಿದ್ದಾರೆ. ಇದರಿಂದ ರೈತರು ಕಂಗೆಟ್ಟು ಹೋಗಿದ್ದಾರೆ.
ಪ್ರತಿ ಎಕರೆಗೆ ಗೋವಿನಜೋಳ ಬೆಳೆಯನ್ನು ಬೆಳೆಯಲು ರೈತ 25 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಿದ್ದು ಅತಿಯಾದ ಮಳೆಗೆ ಬೆಳೆಯು ಹಾಳಾಗಿ ಅಲ್ಪ ಸ್ವಲ್ಪ ಬೆಳೆಯನ್ನು ಮಳೆಯ ನಡುವೆ ಕಟಾವು ಮಾಡಿ ಹದವಾಗಿ ಒಣಗಿಸಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ₹1800ಗೆ ಕುಸಿದಿದೆ. ಇಷ್ಟು ದರಕ್ಕೆ ಮಾರಿದರೆ ಮಾಡಿದ ಖರ್ಚು ಸಹ ಬರುವುದಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.
ಸರ್ಕಾರದ ನಿರ್ಲಕ್ಷ್ಯ: ಬೆಂಬಲ ಬೆಲೆ ನಿಯಮದಂತೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ಕುಸಿತವಾದ ತಕ್ಷಣ ಬೆಂಬಲ ಬೆಲೆ ಕೇಂದ್ರ ಪ್ರಾರಂಭವಾಗಬೇಕು. ಆದರೆ, ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಕುಸಿತವಾಗಿದೆ. ಆದರೂ ಇದುವರೆಗೂ ಬೆಂಬಲ ಬೆಲೆ ಕೇಂದ್ರ ತೆರೆಯದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ರೈತ ವಿರುಪಾಕ್ಷ ಆಕ್ರೋಶ ವ್ಯಕ್ತಪಡಿಸಿದರು.
ಕೃತಕ ಬೆಲೆ ಕುಸಿತ: ಮೆಕ್ಕೆಜೋಳಕ್ಕೆ ಬೇಡಿಕೆ ಇದೆಯಾದರೂ ಆವಕ ಹೆಚ್ಚಳವಾಗಿದೆ ಎನ್ನುವ ಕಾರಣಕ್ಕಾಗಿಯೇ ದಲ್ಲಾಳಿಗಳು ಮೆಕ್ಕೆಜೋಳ ದರ ಕುಸಿಯುವಂತೆ ಮಾಡಿದ್ದಾರೆ. ಬೇಡಿಕೆ ಇಲ್ಲ ಎಂದು ಸಬೂಬ ನೀಡಿ, ಜೊತೆಗೆ ಮಳೆಯು ಆಗುತ್ತಿದ್ದು ಕಾಳು ಸರಿಯಿಲ್ಲ ಪ್ರತಿ ಕ್ವಿಂಟಲ್ಗೆ ಬರೋಬ್ಬರಿ ನಾಲ್ಕು ನೂರು ರುಪಾಯಿ ಕುಸಿತ ಮಾಡಿದ್ದಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ ಎಂದು ವರುಣಗೌಡ ಪಾಟೀಲ್ ಆರೋಪಿಸಿದ್ದಾರೆ.
ಮೆಕ್ಕೆಜೋಳ ದರ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತಕ್ಷಣ ರಾಜ್ಯ ಸರ್ಕಾರ ಬೆಂಬಲ ಬೆಲೆ ಕೇಂದ್ರ ತೆರೆಯಬೇಕು. ಇಲ್ಲದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರ ಕೆಲ ದಿನಗಳಲ್ಲಿ ಮೆಕ್ಕೆ ಜೋಳ ಬೆಂಬಲ ಬೆಲೆಗೆ ಖರೀದಿ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಈರಣ್ಣ ಸಮಾಗೊಂಡ ರೈತ ಮುಖಂಡರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.