ADVERTISEMENT

ಬ್ಯಾಡಗಿ| ಗೋವಿನಜೋಳ ಕ್ವಿಂಟಲ್‌ಗೆ ₹3 ಸಾವಿರದಂತೆ ಖರೀದಿಸಿ: ರೈತರ ಆಗ್ರರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 4:37 IST
Last Updated 23 ನವೆಂಬರ್ 2025, 4:37 IST
ಹಾವೇರಿಯಲ್ಲಿ ನ.24ರಂದು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ರೈತರನ್ನು ಜಾಗೃತಗೊಳಿಸುವ ಪ್ರಚಾರ ವಾಹನಕ್ಕೆ ಬ್ಯಾಡಗಿಯಲ್ಲಿ ರೈತ ಮುಖಂಡರು ಚಾಲನೆ ನೀಡಿದರು
ಹಾವೇರಿಯಲ್ಲಿ ನ.24ರಂದು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ರೈತರನ್ನು ಜಾಗೃತಗೊಳಿಸುವ ಪ್ರಚಾರ ವಾಹನಕ್ಕೆ ಬ್ಯಾಡಗಿಯಲ್ಲಿ ರೈತ ಮುಖಂಡರು ಚಾಲನೆ ನೀಡಿದರು   

ಬ್ಯಾಡಗಿ: ಜಿಲ್ಲಾ ಕೇಂದ್ರ ಸ್ಥಳದಲ್ಲಿ ನ.24ರಿಂದ ಬೆಳಿಗ್ಗೆ 10 ಗಂಟೆಯಿಂದ ನಡೆಸಲು ಉದ್ದೇಶಿಸಿರುವ ರಾಜ್ಯ ರೈತ ಸಂಘದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ರೈತರು ಪಾಲ್ಗೊಳ್ಳುವಂತೆ ಜಾಗೃತಗೊಳಿಸುವ ಪ್ರಚಾರ ವಾಹನಕ್ಕೆ ಪಟ್ಟಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಈ ವೇಳೆ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ಹಾವೇರಿ ಜಿಲ್ಲೆಯೊಂದರಲ್ಲಿಯೇ ರೈತರು 12 ಲಕ್ಷ ಟನ್‌ಗೂ ಅಧಿಕ ಗೋವಿನಜೋಳ ಬೆಳೆದಿದ್ದಾರೆ. ಆದರೆ 10 ಲಕ್ಷ ಟನ್‌ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಕನಿಷ್ಠ ಜ್ಞಾನ ಇಲ್ಲದೆ ಸರ್ಕಾರದ ಪ್ರತಿನಿಧಿಗಳಾದ ಮಂತ್ರಿಗಳು ರಾಜ್ಯದ ರೈತರಿಗೆ ತಪ್ಪು ಸಂದೇಶ ರವಾನಿಸುವುದನ್ನು ನಿಲ್ಲಿಸಬೇಕು. ತಳಬುಡವಿಲ್ಲದ ಹೇಳಿಕೆಯಿಂದ ರೈತರನ್ನು ತಪ್ಪು ದಾರಿಗೆ ಕೊಂಡೊಯ್ಯುವ ಹುನ್ನಾರ ಅವರ ಹೇಳಿಕೆಯಲ್ಲಿ ಅಡಗಿದೆ’ ಎಂದು ಆರೋಪಿಸಿದರು.

‘ಕೇವಲ ಬೆಂಬಲ ಬೆಲೆ ನೀಡಿದರೆ ಸಾಲದು ಕ್ವಿಂಟಲ್‌ಗೆ ₹600 ಪ್ರೋತ್ಸಾಹ ಧನ ಸೇರಿದಂತೆ ಒಟ್ಟು ₹3 ಸಾವಿರ ನೀಡಿ ಗೋವಿನಜೋಳ ಖರೀದಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ‘ಗೋವಿನಜೋಳ ಖರೀದಿಗೆ ಸರ್ಕಾರ ಮುಂದಾಗಿದೆ ಎನ್ನುನ ಮಾಹಿತಿ ಲಭ್ಯವಾಗಿದ್ದು, ಅದಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ ಇದೊಂದು ಬೋಗಸ್ ಹೇಳಿಕೆಯಾಗಿದೆ. ಯಾವುದೇ ಕಾರಣಕ್ಕೂ ನ.24ರಿಂದ ನಡೆಯುವ ಅನಿರ್ದಿಷ್ಟ ಅವಧಿಯ ಮುಷ್ಕರ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಉದ್ಭವಿಸದು. ನ.24ರಂದು ನಡೆಯುವ ಮುಷ್ಕರದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು. 

ರೈತ ಸಂಘದ ನಗರ ಘಟಕದ ಅಧ್ಯಕ್ಷ ಚಿಕ್ಕಪ್ಪ ಛತ್ರದ ಮಾತನಾಡಿ, ‘ಸರ್ಕಾರ ಸಹಾಯಧನ ಮಾತ್ರ ಪ್ರಸ್ತಾಪಿಸಿದ್ದು, ಮಾಹಿತಿ ಪಡೆದುಕೊಳ್ಳದೆ 10 ಲಕ್ಷ ಟನ್ ಗೋವಿನಜೋಳ ಖರೀದಿಗೆ ಮುಂದಾಗಿರುವ ಹೇಳಿಕೆ ನೀಡುವ ಮೂಲಕ ಸರ್ಕಾರ ರೈತರನ್ನು ದಾರಿ ತಪ್ಪಿಸುವ ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.