ADVERTISEMENT

ಹಾವೇರಿ: ಹದಗೆಟ್ಟು ಹೋದ ತಡಸ–ಶಿರಸಿ ರಸ್ತೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:51 IST
Last Updated 20 ಆಗಸ್ಟ್ 2025, 2:51 IST
ತಡಸ ಗ್ರಾಮದಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ತೆಗ್ಗು ಗುಂಡಿ ಬಿದ್ದಿದ್ದು ವಾಹನ ಸವಾರರು ಪರದಾಡುವಂತೆ ಆಗಿದೆ
ತಡಸ ಗ್ರಾಮದಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ತೆಗ್ಗು ಗುಂಡಿ ಬಿದ್ದಿದ್ದು ವಾಹನ ಸವಾರರು ಪರದಾಡುವಂತೆ ಆಗಿದೆ   

ತಡಸ: ಗ್ರಾಮವು ಧಾರವಾಡ, ಉತ್ತರಕನ್ನಡ ಹಾಗೂ ಹಾವೇರಿ ಜಿಲ್ಲೆಯ ಮಲೆನಾಡಿನ ಅಂಚಿನ ಕೊನೆಯ ಗ್ರಾಮವಾಗಿದ್ದು ಹಲವು ಪ್ರವಾಸಿ ತಾಣಗಳ ಸಂಪರ್ಕಿಸುವ ಕೊಂಡಿಯಾಗಿದೆ. ಗ್ರಾಮದ ಮೂಲಕ ಹುಬ್ಬಳ್ಳಿ–ಶಿರಸಿ ರಾಜ್ಯ ಹೆದ್ದಾರಿ ಹಾದುಹೋಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಹಾಳಾಗಿ ರಸ್ತೆ ತುಂಬೆಲ್ಲ ತಗ್ಗು ಗುಂಡಿಗಳ ಬಿದ್ದು ವಾಹನ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ವಾಹನ ಸವಾರರ ಅಳಲಾಗಿದೆ.

‘ತಡಸ ಗ್ರಾಮದಿಂದ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿಗೆ ಹೋಗುವ ರಾಜ್ಯ ಹೆದ್ದಾರಿ ಗೋಳು ಹೇಳ ತೀರದಾಗಿದೆ. ಕೇವಲ ಅರ್ಧ ಗಂಟೆಯಲ್ಲಿ ತಲುಪಬೇಕಾದ ಹಾದಿ ಒಂದೂವರೆ ಗಂಟೆ ಸಮಯ ತೆಗೆದುಕೊಂಡು ಸಾಗುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಾಹನ ಸವಾರ ಸಂತೋಷ ಹೇಳುತ್ತಾರೆ.

ಭಾರಿ ಪ್ರಮಾಣದಲ್ಲಿ ತಗ್ಗು ಬಿದ್ದಿದ್ದು ಸುರಿಯುತ್ತಿರುವ ಮಳೆಯಲ್ಲಿ ನೀರು ತುಂಬಿಕೊಂಡು ನಿತ್ಯ ಅಪಘಾತ ಸಂಭವಿಸುತ್ತಲೇ ಇರುತ್ತವೆ. ಅಧಿಕಾರಿಗಳು ಎರಡು ಶಿಗ್ಗಾವಿ ಹಾಗೂ ಮುಂಡಗೋಡ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವುದರಿಂದ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಎಂಬುದು ಸ್ಥಳಿಯ ನಿವಾಸಿಗಳ ಆಕ್ರೋಶವಾಗಿದೆ.

ADVERTISEMENT

ಮುರ್ಡೇಶ್ವರ, ಯಾಣ, ಧರ್ಮಸ್ಥಳ, ಶಿರಸಿ, ಸಹಸ್ರ ಲಿಂಗ, ಉಡುಪಿ, ಹೀಗೆ ಹಲವು ಪ್ರವಾಸಿಗರು ಹುಬ್ಬಳ್ಳಿಯಿಂದ ಹಾದು ಹೋಗುವ ಪ್ರಮುಖ ಮಾರ್ಗ ಇದಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ರಾಜ್ಯ ಹೆದ್ದಾರಿ ದುರಸ್ತಿ ಕಾರ್ಯ ಮಾಡಿ ಪ್ರವಾಸಿಗರಿಗೆ ಅನುಕೂಲ ಮಾಡಬೇಕು ಎಂಬುದು ಪ್ರವಾಸಿಗರ ಅಳಲಾಗಿದೆ.

‘ತಾಯವ್ವ ದೇವಿಯ ದೇವಸ್ಥಾನದಿಂದ ಹಿಡಿದು ವಡಗಟ್ಟ ನಾಕಾ ಹಾಗೂ ಮುಂಡಗೋಡ ತಾಲೂಕಿನ ವ್ಯಾಪ್ತಿಗೆ ಒಳಪಡುವ ರಸ್ತೆಯವರೆಗೆ ಅಪಾರ ಗಾತ್ರದ ಗುಂಡಿಗಳು ಮರಣಕ್ಕೆ ಆಹ್ವಾನ ನೀಡುವಂತೆ ಇವೆ. ಶೀಘ್ರದಲ್ಲಿ ಸರಿಪಡಿಸದೇ ಇದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಮಂಜುನಾಥ ಓಲೇಕಾರ ಹೇಳಿದರು.

ರಸ್ತೆಗೆ ಚಾಚಿದ ಮರಗಳು: ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲೆಲ್ಲ ಅಪಾರ ಪ್ರಮಾಣದಲ್ಲಿ ಗಿಡ ಗಂಟಿಗಳು ಬೆಳೆದು ರಸ್ತೆಗೆ ಬಾಗಿದ್ದು, ಮುಂದೆ ಬರುವ ವಾಹನ ಸವಾರರಿಗೆ ಕಾಣದಂತಾಗಿದೆ. ಅಧಿಕಾರಿಗಳು ರಸ್ತೆ ಅಕ್ಕಪಕ್ಕದಲ್ಲಿನ ಗಿಡಗಂಟೆಗಳನ್ನು ತೆರವುಗೊಳಿಸುವ ಮೂಲಕ ಮುಂದಾಗುವ ದೊಡ್ಡ ಅಪಘಾತವನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿದ್ದು ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುವ ಶಾಸಕರು ಅಧಿಕಾರಿಗಳ ಕಣ್ಣಿಗೆ ಕಾಣದೇ ಇರುವುದು ದುರಂತ.
ಶಿವಾಜಿ, ಗ್ರಾಮಸ್ಥ
ಶಿರಸಿ–ಹುಬ್ಬಳ್ಳಿ ರಸ್ತೆಯ ಬದಿಯಲ್ಲಿ ಬೆಳೆದಿರುವ ಗಿಡ ಗಂಟೆ ತೆರೆಯಲು ಟೆಂಡರ್ ಕರೆಯಲಾಗಿದೆ ರಸ್ತೆ ಕಾಮಗಾರಿ ಶೀಘ್ರ ಆರಂಭವಾಗಲಿದೆ.
ಬಸವರಾಜ.ಡಿ.ಬಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.