ಗುತ್ತಲ (ಹಾವೇರಿ): ಶಾಲಾ ಆವರಣದಲ್ಲಿ ಯುವಕರ ಗುಂಪೊಂದು ಮಾರಕಾಸ್ತ್ರ (ಲಾಂಗ್) ಬಳಸಿ ಕೇಕ್ ಕತ್ತರಿಸುವ ಮೂಲಕ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಮೀಪದ ಹೊಸರಿತ್ತಿ ಗ್ರಾಮದ ಸರ್ಕಾರಿ ಉರ್ದು ಶಾಲೆಯಲ್ಲಿ ಸಾಧಿಕ್ ಹವಾಲ್ದಾರ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಲಾಂಗ್ ಬಳಸಿ ಕೇಕ್ಗಳನ್ನು ಕತ್ತರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ʼಸ್ವಾತಂತ್ರ್ಯ ಹೋರಾಟಗಾರರು ಜನಿಸಿರುವ ಪುಣ್ಯ ನೆಲದಲ್ಲಿ ಯುವಕರು ಈ ರೀತಿಯ ಪುಂಡಾಟಿಕೆ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಇದೇ ರೀತಿ ಮುಂದುವರಿದರೆ ಗ್ರಾಮದಲ್ಲಿ ರೌಡಿಸಂ ತಲೆ ಎತ್ತುವುದರಲ್ಲಿ ಸಂದೇಹವಿಲ್ಲʼ ಎಂದು ಗ್ರಾಮದ ಹಿರಿಯರು ಕಳವಳ ವ್ಯಕ್ತಪಡಿಸಿದರು.
ಇಂತಹ ಘಟನೆಗಳು ಮರುಕಳಿಸದಂತೆ ಯುವಕ ಹಾಗೂ ಆತನ ಸ್ನೇಹಿತರ ಮೇಲೆ ಪೋಲಿಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಾವೇರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ’ಪ್ರಜಾವಾಣಿ ಪತ್ರಿಕೆ’ಯೊಂದಿಗೆ ಮಾತನಾಡಿ, ಇಂತಹ ಘಟನೆಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತವೆ. ಘಟನೆ ತಿಳಿದ ತಕ್ಷಣ ಆರೋಪಿಯನ್ನು ಬಂಧಿಸಿದ್ದೇವೆ' ಎಂದು ತಿಳಿಸಿದರು.
ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.