ಹಾವೇರಿ: ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮೈಲಾರ ಮಹಾದೇವ, ತಿರಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ತ್ರಿವಳಿಗಳು ಜೀವ ಬಲಿದಾನ ಮಾಡಿದ ದಿನ. ಪ್ರತಿ ವರ್ಷ ಅತ್ಯಂತ ಹೃದಯ ಸ್ಪರ್ಶಿಯಾಗಿ ಅವರ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾದ ಕರಾಳ ನೆರಳಿನಿಂದಾಗಿ ವೀರಸೌಧದಲ್ಲಿ ನೀರವ ಮೌನ ಆವರಿಸಿತ್ತು.
ಸತತ 77 ವರ್ಷಗಳಿಂದ ಏಪ್ರಿಲ್ 1 ಅನ್ನು ಮೈಲಾರರ ಅನುಯಾಯಿಗಳು, ಜನಪ್ರತಿನಿಧಿಗಳು, ಸಮಾಜ ಸೇವಕರು ಹಾಗೂ ಸಾಹಿತಿ ಕಲಾವಿದರು ಪಾಲ್ಗೊಂಡು ಹುತಾತ್ಮರ ಸ್ಮರಣೆ ನಡೆಸಲಾಗುತ್ತಿತ್ತು.
ಸಾವಿರಾರು ಅಭಿಮಾನಿಗಳು ಮುಕ್ತಿಧಾಮಕ್ಕೆ ಸ್ವಯಂ ಪ್ರೇರಣೆಯಿಂದ ಬಂದು ನೂರಾರು ಹಾರ ಹಾಕುವುದು, ಗದ್ದುಗೆಗೆ ಹೂವಿನ ಅಲಂಕಾರ ಮಾಡುವುದು, ಉಪನ್ಯಾಸ, ದೇಶ ಭಕ್ತಿಗೀತೆ, ಕವಿಗೋಷ್ಠಿ ಒಮ್ಮೊಮ್ಮೆ ನಾಟಕ ಪ್ರದರ್ಶನ ನಡೆಯುತ್ತಿದ್ದವು. ಏಳು ದಶಕಗಳ ಸುದೀರ್ಘ ಪರಂಪರೆಗೆ ಇದೇ ಮೊದಲ ಬಾರಿ ಅಡ್ಡಿಯಾಗಿದೆ ಎಂದು ಮೈಲಾರ ಮಹಾದೇವಪ್ಪನವರ ಟ್ರಸ್ಟ್ನ ಹಿರಿಯ ಸದಸ್ಯರಾದ ವಿ.ಎನ್. ತಿಪ್ಪನಗೌಡ ತಿಳಿಸಿದ್ದಾರೆ.
ವೀರಸೌಧಕ್ಕೆ ಟ್ರಸ್ಟ್ ಸದಸ್ಯರಾದ ಸತೀಶ ಕುಲಕರ್ಣಿ, ಹಿರಿಯ ಸ್ವಾತಂತ್ರ್ಯ ಯೋಧ ಬ್ಯಾಡಗಿಯ ಷಡಕ್ಷರಪ್ಪ ಮಹಾರಾಜಪೇಟರ ಪುತ್ರ ಡಾ.ಜಗದೀಶ ಮಹಾರಾಜಪೇಟ, ವೀರಪ್ಪ ವಲ್ಟರ, ಪರಮೇಶಪ್ಪ ಮಡ್ಲೂರ ಹಾಗೂ ಅಲ್ಲಿಯೇ ಕೊರೊನಾ ಕರ್ತವ್ಯ ನಿರತ ಕಲಾವಿದ ಕರಿಯಪ್ಪ ಹಂಚಿನಮನಿ ಕೆಲವೇ ಕೆಲವರು ಸಮಾಧಿ ಸ್ಥಳದ ಹೊರಬಾಗಿಲಿಗೆ ಬರಿಗೈಯಿಂದ ಬಂದು ನಮಸ್ಕರಿಸಿ ಹೋದದ್ದು ಬಿಟ್ಟರೆ ಎಲ್ಲವೂ ನೀರವ ಮೌನದಲ್ಲಿ ಮುಳುಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.