ಹಾವೇರಿ: ‘ಬಿಜೆಪಿಯವರು ನೋಟು ಕೊಟ್ಟರೆ ತೆಗೆದುಕೊಂಡು ಕಾಂಗ್ರೆಸ್ಗೆ ಓಟು ಹಾಕಿ ಎಂದು ಹೇಳುವ ಡಿ.ಕೆ. ಶಿವಕುಮಾರ್ ಅವರು ಕೋಟಿಗಟ್ಟಲೆ ಲೂಟಿ ಹೊಡೆದಿದ್ದಕ್ಕೆ ತಾನೇ ಜೈಲಿಗೆ ಹೋಗಿದ್ದು’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದರು.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಎಲ್ಲಿಯೂ ಮತದಾರರಿಗೆ ದುಡ್ಡು ಹಂಚಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಪರ ಮತ ಕೇಳುತ್ತಿದ್ದೇವೆ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದಕ್ಕೆ ಎಲ್ಲಿಯೂ ತಪ್ಪು ಸಾಬೀತಾಗಿಲ್ಲ. ಸೋಲುವ ಭೀತಿಯಿಂದ ಕಾಂಗ್ರೆಸ್ನವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಸಚಿವ ಮುನಿರತ್ನ ಮಾಧ್ಯಮದವರೊಂದಿಗೆ ಮಾತನಾಡಿ,ನರೇಂದ್ರ ಮೋದಿ ರೇಷನ್ ಅಂಗಡಿಗೆ ಹೋಗಿ ಅನುಭವ ಇದೆಯಾ? ಎಂಬ ಕಾಂಗ್ರೆಸ್ ವರಿಷ್ಠ ರಣದೀಪ್ ಸುರ್ಜೆವಾಲಾ ಕೇಳುತ್ತಾರೆ. ಮೋದಿ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರಲ್ಲ. ಬಡಕುಟುಂಬದಲ್ಲಿ ಹುಟ್ಟಿದ ಅವರು ಸೊಸೈಟಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಅಕ್ಕಿ ತೆಗೆದುಕೊಂಡು ಬಂದಿದ್ದಾರೆ ಎಂದು ತಿರುಗೇಟು ನೀಡಿದರು.
ನಳೀನ್ ಕುಮಾರ್ ಕಟೀಲ್ ಹುಚ್ಚ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ,ಯಾರು ಹುಚ್ಚರು? ಯಾರು ಬುದ್ಧಿವಂತರು? ಎಂಬುದನ್ನು ಮತದಾರರು ಶೀಘ್ರದಲ್ಲೇ ತಿಳಿಸಲಿದ್ದಾರೆ, ಕಾದು ನೋಡಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.