ADVERTISEMENT

ತಿಳವಳ್ಳಿ: ವಿದ್ಯುತ್ ಉಪ ಕೇಂದ್ರಕ್ಕೆ ಶಾಸಕ ಮಾನೆ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:14 IST
Last Updated 10 ಮಾರ್ಚ್ 2025, 14:14 IST
ತಿಳವಳ್ಳಿ ಸಮೀಪದ ಶೇಷಗಿರಿಯ 33 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ,   ಪರಿಶೀಲಿಸಿದರು
ತಿಳವಳ್ಳಿ ಸಮೀಪದ ಶೇಷಗಿರಿಯ 33 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ,   ಪರಿಶೀಲಿಸಿದರು   

ತಿಳವಳ್ಳಿ: ಲೈನ್ ಕ್ಲಿಯರನ್ಸ್ ಪಡೆದ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ತಾಲ್ಲೂಕಿನ ಶೇಷಗಿರಿ ಗ್ರಾಮದಲ್ಲಿನ 33 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಭಾನುವಾರ ದಿಢೀರ್ ಭೇಟಿ ನೀಡಿ, ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.

ಕೇಂದ್ರದಲ್ಲಿನ ಫೀಡರ್‌ಗಳ ಸಂಖ್ಯೆ, ವಿದ್ಯುತ್ ಪೂರೈಕೆ ಕುರಿತು ನಿರ್ವಹಿಸಲಾಗುತ್ತಿರುವ ದಾಖಲೆ, ಲೈನ್ ಕ್ಲಿಯರನ್ಸ್ ನೀಡುವ ಸಂದರ್ಭದಲ್ಲಿ ಅನುಸರಿಸಲಾಗುತ್ತಿರುವ ಎಚ್ಚರಿಕೆ ಕ್ರಮಗಳ ಕುರಿತು ಆಪರೇಟರ್ ಬಳಿ ಮಾಹಿತಿ ಪಡೆದರು.

ವಿದ್ಯುತ್‌ ಪೂರೈಕೆ ಮತ್ತು ಸ್ಥಗಿತಕ್ಕೆ ಸಂಬಂಧಿಸಿದಂತೆ ಒಂದು ದಿನಕ್ಕೆ ಕನಿಷ್ಠ 1000-1200 ಕರೆ ಬರುತ್ತವೆ ಎಂದು ಆಪರೇಟರ್‌ ಮಾಹಿತಿ ನೀಡಿದರು. 

ADVERTISEMENT

‘ವಿದ್ಯುತ್ ಪೂರೈಕೆ ಸಮಯದ ಕುರಿತು ಮೊದಲೇ ಮಾಹಿತಿ ನೀಡಬೇಕು. ಪ್ರಮುಖವಾಗಿ ಲೈನ್ ಕ್ಲಿಯರನ್ಸ್ ನೀಡುವ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಶಾಖಾಧಿಕಾರಿಯ ನಿರ್ದೇಶನ ಪಾಲಿಸಬೇಕು. ಗುತ್ತಿಗೆದಾರರು ಲೈನ್ ಕ್ಲಿಯರನ್ಸ್ ಕೇಳಿದಾಗ ಕೊಡಬಾರದು. ನಿರ್ಲಕ್ಷ್ಯ ವಹಿಸಿದರೆ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಗಮನ ಇರಲಿ’ ಎಂದು ಸೂಚಿಸಿದರು.

‘ಬಿಸಿಲಿನ ಪ್ರಭಾವ ಹೆಚ್ಚಿದೆ. ಹಾಗಾಗಿ ಬೆಳೆಗಳಿಗೆ ನೀರಿನ ಅಗತ್ಯವಿದ್ದು, ರೈತರು ವಿದ್ಯುತ್ ಪೂರೈಕೆ ಕುರಿತು ಮಾಹಿತಿ ಪಡೆಯಲು ಕರೆ ಮಾಡಿದಾಗ ಬೇಸರಿಸಿಕೊಳ್ಳದೇ ಸಮಾಧಾನದಿಂದ ಉತ್ತರ ನೀಡಿ. ಲಭ್ಯವಿರುವ ವಿದ್ಯುತ್ ಸದ್ಬಳಕೆ ಮಾಡಿಕೊಂಡು ರೈತರ ಅಗತ್ಯಕ್ಕೆ ಅನುಗುಣವಾಗಿ ಪೂರೈಕೆಗೆ ಗಮನ ಹರಿಸಿ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.