ನಿರಂಜನಾನಂದಪುರಿ ಸ್ವಾಮೀಜಿ, ಕನಕ ಗುರು ಪೀಠ, ಕಾಗಿನೆಲೆ ಕ್ಷೇತ್ರ, ಹಾವೇರಿ ಜಿಲ್ಲೆ
ಮನುಷ್ಯ ಜನ್ಮತಃ ನಿರ್ಗುಣಿಯಾಗಿರುತ್ತಾನೆ. ಬೆಳೆಯುತ್ತಾ ಸದ್ಗುಣಿ ಅಥವಾ ದುರ್ಗುಣಿಯಾಗಿ ಬೆಳೆಯುತ್ತಾನೆ. ಅಂತಹ ದುರ್ಗುಣದಲ್ಲಿ ಅಹಂಕಾರವು ಗರ್ವ, ಜಂಬ, ದರ್ಪ, ಹಮ್ಮು, ಮದ, ಕ್ರೋಧ, ಕ್ರೌರ್ಯ ಮುಂತಾದ ಆಸುರೀ ಸ್ವಭಾವಗಳ ಮೂಲಕ ನಾನು, ನನ್ನದು, ನನ್ನಿಂದ, ನನಗೆ, ನನಗೋಸ್ಕರ ಎಂಬ ಭಾವಗಳ ಮೂಲಕ ಮನುಷ್ಯನಲ್ಲಿ ಅಭಿವ್ಯಕ್ತವಾಗುತ್ತಿರುತ್ತದೆ.
ಮನುಷ್ಯನ ಲೌಕಿಕ ಮತ್ತು ಅಲೌಕಿಕ ಸುಖಕ್ಕೆ ಈ ಅಹಂಕಾರ ಅಡಚಣೆಯಾಗಿರುತ್ತದೆ. ಇದು ಬದುಕಿನ ಕೆಟ್ಟ ದಿನಗಳಿಗೆ ರಾಜಮಾರ್ಗವಿದ್ದಂತೆ. ಪ್ರಾರಂಭದಲ್ಲಿ ಖುಷಿಕೊಟ್ಟರೂ ಕೊನೆಗೆ ಹಿಂತಿರುಗಲಾಗದಷ್ಟು ಅಧೋಗತಿಗೆ ಮನುಷ್ಯನನ್ನು ಹಾಳುಮಾಡುತ್ತದೆ.
ಅಹಂಕಾರ ಸೋಲನ್ನು ಒಪ್ಪಿಕೊಳ್ಳದೇ ಪ್ರತೀಕಾರಕ್ಕಾಗಿ ಕಾಯುತ್ತಾ ಕಠೋರ ಮನಸ್ಥಿತಿಯನ್ನು ಹೊಂದಿ, ಸ್ವಾರ್ಥ ಚಿಂತನೆಯಿಂದ ಮಾನಸಿಕ ನೆಮ್ಮದಿಯನ್ನು ಕೆಡುಸುತ್ತದೆ. ಅಹಂಕಾರಿಗಳು ಎಲ್ಲರೂ ನನಗೆ ಗೌರವ, ಮರ್ಯಾದೆ ಕೊಡಬೇಕೆಂಬ ಅಪೇಕ್ಷೆ ಇಟ್ಟುಕೊಂಡು ಮನಸ್ಸಿಗೆ ಬಂದಂತೆ ಸತ್ಯವಿಲ್ಲದ, ಸನ್ನಡತೆಯಿಲ್ಲದ ವರ್ತನೆಗಳಿಂದ ಪ್ರತಿಕ್ರಿಯಿಸುತ್ತಿರುತ್ತಾರೆ.
ಅಹಂಕಾರಿಗಳ ಅಂತರಂಗ ಮತ್ತು ಬಹಿರಂಗದ ಆಲೋಚನೆಗಳು ಪರರಿಗೆ ದುಃಖಕರವಾಗಿರುತ್ತವೆ. ಸ್ವಸಂಹಾರಕ್ಕೆ ಕಾರಣವಾಗುವ ಕೆಟ್ಟ ಕರ್ಮಗಳನ್ನು ಮಾಡುತ್ತ ಅಶಾಶ್ವತ ವಿಷಯಗಳಿಂದ ಆಕರ್ಷಿತರಾಗಿ ಅವನತಿ ಹೊಂದುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.