ಹಾವೇರಿ: ‘ಪಾರ್ಥೇನಿಯಂ ಸಸ್ಯದಿಂದಾಗುವ ಹಾನಿ ಮತ್ತು ತೊಂದರೆಗಳನ್ನು ಪರಿಗಣಿಸಿ ಭಾರತದಲ್ಲಿ ಈ ಸಸ್ಯವನ್ನು ರಾಷ್ಟ್ರೀಯ ಕಳೆಯಾಗಿ ಗುರುತಿಸಲಾಗಿದೆ. ಆದ್ದರಿಂದ, ಈ ಕಳೆಯನ್ನು ಹೂವು ಬಿಡುವುದಕ್ಕಿಂತ ಮುಂಚೆಯೇ ಬೇರು ಸಮೇತ ಕಿತ್ತು ಹಾಕುವುದು ಸೂಕ್ತ’ ಎಂದುದೇವಿಹೊಸೂರ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಮುಖ್ಯಸ್ಥ ಡಾ.ಪ್ರಭುದೇವ ಅಜ್ಜಪ್ಪಳವರ ಅಭಿಪ್ರಾಯಪಟ್ಟರು.
ದೇವಿಹೊಸೂರ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ ಹಾಗೂ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಪಾರ್ಥೇನಿಯಂ ನಿರ್ಮೂಲನಾ ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾವಿದ್ಯಾಲಯದ ಡೀನ್ ಡಾ.ಲಕ್ಷೀನಾರಾಯಣ ಹೆಗಡೆ ಮಾತನಾಡಿ, ಪಾರ್ಥೇನಿಯಂ ಒಂದು ಕಳೆಯಾಗಿರುವುದರಿಂದ ಇದರ ಸಮರ್ಪಕ ನಿರ್ವಹಣೆಗೆ ಒತ್ತು ಕೊಡಲು ಸಲಹೆ ನೀಡಿದರು.
ಸಹಾಯಕ ಪ್ರಾಧ್ಯಾಪಕ ಡಾ.ವಿನಯಕುಮಾರ ಎಂ.ಎಂ. ಮಾತನಾಡಿ, ‘ಪಾರ್ಥೇನಿಯಂ ಕಳೆಯು 1950ರ ದಶಕದಲ್ಲಿ ಭಾರತ ದೇಶಕ್ಕೆ ಗೋಧಿ ಆಮದಿನೊಂದಿಗೆ ಮೊದಲು ಪ್ರವೇಶಿಸಿತು. ಈ ಒಂದು ಕಳೆಯು ಬೆಳೆಯುವ ಪ್ರದೇಶ, ಬೀಳು ಭೂಮಿ, ಉಳುಮೆ ಮಾಡದ ಪ್ರದೇಶ, ರಸ್ತೆ ಬದಿ, ರೈಲು ದಾರಿ ಪ್ರದೇಶವನ್ನು ಪರಿಗಣನೆಗೆ ತೆಗೆದುಕೊಂಡರೆ ಸುಮಾರು 35 ದಶಲಕ್ಷ ಹೆಕ್ಟೇರ್ ಪ್ರದೇಶವನ್ನು ಆವರಿಸಿಕೊಂಡು ಕಳೆಯಾಗಿ ಕಾಡುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ಡಾ.ತಿಪ್ಪಣ್ಣ ಕೆ.ಎಸ್. ಡಾ.ಸಿದ್ಧನಗೌಡ ಯಡಚಿ, ಡಾ.ಕಿರಣ್ಕುಮಾರ, ಡಾ.ಚಂದ್ರಾವತಿ ಬಿ, ಸಿದ್ಧಾರೂಢ ದುಳೆಹೊಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.