ADVERTISEMENT

ವಾಹನದ ವಿಮಾ ಮೊತ್ತ ಪಾವತಿಸಿ

ಇನ್ಸೂರೆನ್ಸ್ ಕಂಪನಿಗೆ ಗ್ರಾಹಕರ ಆಯೋಗ ಆದೇಶ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:23 IST
Last Updated 3 ಡಿಸೆಂಬರ್ 2022, 14:23 IST
.
.   

ಹಾವೇರಿ: ವಾಹನದ ವಿಮಾ ಮೊತ್ತ ಪಾವತಿಸುವಂತೆ ಚೋಳಮಂಡಲಮ್ ಎಂ.ಎಸ್. ಜನರಲ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಸವಣೂರುತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ಮಂಜುನಾಥ ಚನ್ನಪ್ಪ ದೇವಗಿರಿ ಅವರು ತಮ್ಮ ದ್ವಿಚಕ್ರ ವಾಹನಕ್ಕೆ ಚೋಳಮಂಡಲಮ್ ಎಂ.ಎಸ್.ಜನರಲ್ ಇನ್ಸೂರನ್ಸ್ ಕಂಪನಿಯಲ್ಲಿ ವಿಮಾ ಪಾಲಿಸಿ ಮಾಡಿಸಿದ್ದರು. ಹಾವೇರಿ ನಗರದ ಕುರಿ ಮಾರುಕಟ್ಟೆಯಲ್ಲಿ ದಿನಾಂಕ: 17-03-2021ರಂದು ವಾಹನ ನಿಲ್ಲಿಸಿದ ಸಂದರ್ಭದಲ್ಲಿ ವಾಹನ ಕಳ್ಳತನವಾಗಿತ್ತು.

ದ್ವಿಚಕ್ರ ವಾಹನ ಕಳುವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಗತ್ಯ ದಾಖಲೆಯೊಂದಿಗೆ ವಿಮಾ ಕಂಪನಿಗೆ ಪರಿಹಾರ ನೀಡಲು ವರದಿ ಸಲ್ಲಿಸಿದ್ದರು. ವಿಮಾ ಕಂಪನಿ ಪಾಲಿಸಿ ಹಣ ನೀಡಲು ನಿರಾಕರಿಸಿದ ಕಾರಣ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯರಾದ ಉಮಾದೇವಿ ಎಸ್. ಹಿರೇಮಠ ಅವರು, ವಿಮಾ ಮೊತ್ತ ₹55,836 ಮೊತ್ತವನ್ನು 30 ದಿನದೊಳಗಾಗಿ ನೀಡಲು ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗೆ ₹2 ಸಾವಿರ, ಪ್ರಕರಣದ ಖರ್ಚು ₹2 ಸಾವಿರಗಳನ್ನು ಪಾವತಿಸಲು ಆದೇಶಿಸಿದ್ದಾರೆ.

ಇದಕ್ಕೆ ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.