ADVERTISEMENT

ಪಾದಚಾರಿ ಮಾರ್ಗ ಒತ್ತುವರಿ: ಅಪಘಾತ ವಲಯವಾದ ಬೆಂಗಳೂರು ವೃತ್ತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 3:55 IST
Last Updated 20 ಜುಲೈ 2025, 3:55 IST
ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬೆಂಗಳೂರು ವೃತ್ತದಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಮಳಿಗೆಗಳನ್ನು ನಿರ್ಮಿಸಿರುವುದು
ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬೆಂಗಳೂರು ವೃತ್ತದಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಮಳಿಗೆಗಳನ್ನು ನಿರ್ಮಿಸಿರುವುದು   

ಹಂಸಬಾವಿ (ಹಿರೇಕೆರೂರು): ತಾಲ್ಲೂಕಿನ ಹಂಸಬಾವಿ ಗ್ರಾಮದ ಮುಖ್ಯ ಪ್ರವೇಶ ದ್ವಾರದಲ್ಲಿರುವ ಬೆಂಗಳೂರು ಸರ್ಕಲ್ (ವೃತ) ಇತ್ತೀಚಿನ ದಿನಗಳಲ್ಲಿ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

ವೃತ್ತದಲ್ಲಿ ಹಾದು ಹೋಗುವ ಪ್ರಯಾಣಿಕರು ಹಾಗೂ ಪಾದಾಚಾರಿಗಳು ನಿತ್ಯವೂ ಪ್ರಾಣಭಯದಲ್ಲಿದ್ದಾರೆ. ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ರಾಣೆಬೆನ್ನೂರಿನಿಂದ ಹಿರೇಕೆರೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದೇ ವೃತ್ತದ ಮೂಲಕ ಹಾದು ಹೋಗುತ್ತದೆ. ಹೀಗಾಗಿ, ಈ ವೃತ್ತ ನಿತ್ಯವೂ ವಾಹನ ಹಾಗೂ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತದೆ.

ಹಾವೇರಿ, ಶಿರಸಿ, ರಾಣೆಬೆನ್ನೂರು, ಬೆಂಗಳೂರು ಕಡೆಯಿಂದ ಹಿರೇಕೆರೂರ ಹಾಗೂ ಸಾಗರ ಕಡೆಗೆ ಹೂಗುವ ಬಸ್‌ಗಳ ನಿಲುಗಡೆ ಜಾಗವೂ ಈ ವೃತ್ತವಾಗಿದೆ. ರಸ್ತೆಯಲ್ಲಿ ನಿಂತುಕೊಂಡು ಜನರು ಬಸ್‌ ಹತ್ತಲು ಕಾಯುತ್ತಿದ್ದಾರೆ. ಎರಡು ದಿಕ್ಕಿನಿಂದ ವಾಹನ ಬರುವುದರಿಂದ ಪಾದಚಾರಿಗಳು ಭಯಪಡುತ್ತಿದ್ದಾರೆ.

ADVERTISEMENT

ಈ ವೃತ್ತದ ಸಮೀಪದಲ್ಲಿ ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳಿವೆ. ಹೋಬಳಿಯ ಕೆಲಸಕ್ಕಾಗಿ ಹಲವು ಗ್ರಾಮಗಳ ಜನರು ಹಂಸಬಾವಿಗೆ ಬಂದು ಹೋಗುತ್ತಾರೆ. ನೂರಾರು ವಿದ್ಯಾರ್ಥಿಗಳು ಸಹ ಇದೇ ವೃತ್ತದ ಮೂಲಕ ಸಂಚರಿಸುತ್ತಿದ್ದಾರೆ.

ಪಾದಚಾರಿ ಮಾರ್ಗ ಒತ್ತುವರಿ: ವೃತ್ತದ ಬಳಿ ಪಾದಚಾರಿ ಮಾರ್ಗವಿದೆ. ಬಹುತೇಕ ಕಡೆಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಬೆಂಗಳೂರು ವೃತ್ತದಿಂದ ಅಂಚೆ ಕಚೇರಿಯವರೆಗೆ ಎರಡು ಬದಿಯಲ್ಲೂ ಪಾದಚಾರಿ ಮಾರ್ಗವಿದೆ. ಈ ಸ್ಥಳವನ್ನು ಹಣ್ಣು, ಗ್ಯಾರೇಜ, ಎಗ್‌ರೈಸ್, ಹೋಟೆಲ್ ಹಾಗೂ ಇತರೆ ಮಳಿಗೆಗಳನ್ನು ನಿರ್ಮಿಸಿಕೊಳ್ಳಲಾಗಿದೆ.

ಪಾದಚಾರಿ ಮಾರ್ಗದಲ್ಲಿ ಓಡಾಡಲು ಜಾಗವಿಲ್ಲದ್ದರಿಂದ ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಪಾದಚಾರಿ ಮಾರ್ಗವನ್ನು ತೆರವು ಮಾಡಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.

‘ಬೆಂಗಳೂರು ವೃತ್ತವನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಬೇಕು. ಪಾದಚಾರಿ ಒತ್ತುವರಿ ತೆರವು ಮಾಡಿ, ಪಾದಚಾರಿಗಳ ಓಡಾಟಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.