ADVERTISEMENT

ರಾಣೆಬೆನ್ನೂರು: ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚಿದ ಹಮಾಲರು

ಅಧಿಕಾರಿ–ಜನಪ್ರತಿನಿಧಿಗಳ ವಿರುದ್ಧ ಜನರ ಹಿಡಿಶಾಪ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 2:59 IST
Last Updated 28 ಸೆಪ್ಟೆಂಬರ್ 2025, 2:59 IST
ರಾಣೆಬೆನ್ನೂರಿನ ಮಾಸೂರು–ಮುಂಡರಗಿ ರಾಜ್ಯ ಹೆದ್ದಾರಿಯ ದೇವರಗುಡ್ಡ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಹಮಾಲರು ಮುಚ್ಚಿದರು 
ರಾಣೆಬೆನ್ನೂರಿನ ಮಾಸೂರು–ಮುಂಡರಗಿ ರಾಜ್ಯ ಹೆದ್ದಾರಿಯ ದೇವರಗುಡ್ಡ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಹಮಾಲರು ಮುಚ್ಚಿದರು    

ರಾಣೆಬೆನ್ನೂರು: ಇಲ್ಲಿಯ ಮಾಸೂರು–ಮುಂಡರಗಿ ರಾಜ್ಯ ಹೆದ್ದಾರಿಯ ರಾಣೆಬೆನ್ನೂರು–ಗುತ್ತಲ–ದೇವರಗುಡ್ಡ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ಕಂಟಕ ಎದುರಾಗಿದ್ದು, ಇದರಿಂದ ಬೇಸತ್ತ ಎತ್ತಿನಗಾಡಿ ಹಮಾಲರು ತಮ್ಮ ಸ್ವಂತ ಖರ್ಚಿನಲ್ಲಿ ಗುಂಡಿಗಳನ್ನು ಮುಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಗೌಳೇರ ಓಣಿ ಹಾಗೂ ಕಂಚಗಾರ ಓಣಿಯ ರಸ್ತೆಯಲ್ಲಿ ದೊಡ್ಡ ತಗ್ಗುಗಳು ಬಿದ್ದಿವೆ. ಮಳೆ ಬಂದ ಸಂದರ್ಭದಲ್ಲಿ ನೀರು ನಿಂತುಕೊಳ್ಳುತ್ತಿದೆ. ಇದೇ ಮಾರ್ಗವಾಗಿ ದಿನವೂ ಸಂಚರಿಸುವ ಎತ್ತಿನಗಾಡಿ ಹಮಾಲರು, ಸಮಸ್ಯೆ ಅನುಭವಿಸುತ್ತಿದ್ದರು.

‘ರಸ್ತೆಯಲ್ಲಿರುವ ಗುಂಡಿಗಳನ್ನು ಮಚ್ಚಿಸಿ’ ಎಂದು ಲೋಕೋಪಯೋಗಿ ಇಲಾಖೆ, ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರು. ನಿರಂತರ ಮಳೆ ಹಾಗೂ ಅನುದಾನ ಕೊರತೆ ಕಾರಣ ಹೇಳಿದ ಅಧಿಕಾರಿಗಳು, ಗುಂಡಿ ಮುಚ್ಚುವ ಕೆಲಸವನ್ನು ಮುಂದೂಡುತ್ತಲಿದ್ದರು.

ADVERTISEMENT

ಇದರಿಂದ ಬೇಸತ್ತ ಹಮಾಲರು, ಪರಸ್ಪರ ಹಣ ಸಂಗ್ರಹಿಸಿ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಅಧಿಕಾರಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ವಿಭಿನ್ನವಾಗಿ ಖಂಡಿಸಿದ್ದಾರೆ.

ಹುಣಸಿಕಟಟಿ ರಸ್ತೆಯಲ್ಲಿರುವ ಕೆಂಪು ಮಣ್ಣನ್ನು ಎತ್ತಿನಗಾಡಿಯಲ್ಲಿ ತುಂಬಿಕೊಂಡು ಗೌಳೇರ ಓಣಿ ಹಾಗೂ ಕಂಚಗಾರ ಓಣಿಯ ರಸ್ತೆಗೆ ತಂದ ಹಮಾಲರು, ಗುಂಡಿ ಇರುವ ಜಾಗದಲ್ಲಿ ಸುರಿದರು. ನಂತರ, ಮಣ್ಣು ಸಮತಟ್ಟು ಮಾಡಿ ಗುಂಡಿ ಮುಚ್ಚಿದರು.

ಹಮಾಲರ ಈ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ, ನಗರಸಭೆ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಇತರೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡದ ಕೆಲಸವನ್ನು ಹಮಾಲರು ಮಾಡಿದ್ದಾರೆ. ಇದನ್ನು ನೋಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನಾಚಿಕೆಯಾಗಬೇಕು’ ಎಂದು ಹಿಡಿಶಾಪ ಹಾಕಿದ್ದಾರೆ.

‘ಮಾಸೂರು–ಮುಂಡರಗಿ ರಸ್ತೆಯಲ್ಲಿ ಒಳಚರಂಡಿ ಹಾಗೂ ನಿರಂತರ ನೀರು ಯೋಜನೆಗಾಗಿ ರಸ್ತೆ ಅಗೆಯಲಾಗಿದ್ದು, ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ರಸ್ತೆ ದುರಸ್ತಿ ಕಾಣದೇ ಅನೇಕ ತಿಂಗಳಾಗಿತ್ತು. ಈ ಬಗ್ಗೆ ನಗರಸಭೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ’ ಎಂದು ಸ್ಥಳೀಯರು ಹೇಳಿದರು.

ಕೃಷಿ ಉತ್ಪನ್ನ ಸಾಗಾಟಕ್ಕೆ ತೊಂದರೆ:

‘ನೆಹರು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ಖರೀದಿಸುವ ವ್ಯಾಪಾರಿಗಳು, ಎತ್ತಿನಗಾಡಿಯ ಹಮಾಲರ ಮೂಲಕ ಗೋದಾಮುಗಳಿಗೆ ಸಾಗಿಸುತ್ತಿದ್ದಾರೆ. ರಸ್ತೆ ಹದಗೆಟ್ಟಿದ್ದರಿಂದ, ನಮಗೆ ತೊಂದರೆ ಆಗಿತ್ತು’ ಎಂದು ಹಮಾಲ ಮಹದೇವಪ್ಪ ಕಿಚಡಿ ದೂರಿದರು.

‘ಸೋಯಾಬಿನ್‌, ಹೆಸರು, ಅಲಸಂದಿ ಸೇರಿದಂತೆ ಇತರೆ ಉತ್ಪನ್ನಗಳ ಚೀಲಗಳನ್ನು ಅನೇಕ ವರ್ಷಗಳಿಂದ ಗೋದಾಮಿಗೆ ಸಾಗಿಸುತ್ತಿದ್ದೇವೆ. ಹದಗೆಟ್ಟ ರಸ್ತೆಯಿಂದಾಗಿ ಚೀಲಗಳನ್ನು ಗೋದಾಮಿಗೆ ಕೊಂಡೊಯ್ಯಲು ತೊಂದರೆ ಆಗುತ್ತಿತ್ತು. ಎತ್ತಿನ ಗಾಡಿಗಳು ಉರುಳಿ ಬಿದ್ದು ನಷ್ಟವೂ ಉಂಟಾಗುತ್ತಿತ್ತು. ಗುಂಡಿಗಳಿಂದಾಗಿ ಎತ್ತಿನ ಗಾಡಿಯೂ ಪದೇ ಪದೇ ಹಾಳಾಗುತ್ತಿತ್ತು. ಎತ್ತುಗಳಿಗೂ ತೊಂದರೆ ಆಗುತ್ತಿತ್ತು. ದುಡಿದ ಹಣದಲ್ಲಿ ಅರ್ಧ ಹಣ, ಎತ್ತಿನ ಗಾಡಿ ದುರಸ್ತಿಗೆ ಖರ್ಚಾಗುತ್ತಿತ್ತು. ಹೀಗಾಗಿ, ನಾವೇ ಹುಣಸೀಕಟ್ಟಿ ರಸ್ತೆಯ ರೈತರ ಬಳಿಯಿಂದ 8 ಟ್ರಿಪ್‌ ಮಣ್ಣು ತಂದು ರಸ್ತೆಯ ಗುಂಡಿಗಳನ್ನು ಮುಚ್ಚಿದ್ದೇವೆ’ ಎಂದು ಹಮಾಲರಾದ ಚಂದ್ರು , ನಾಗಪ್ಪ ಮತ್ತು ಹನುಮಂತ ಹೇಳಿದರು.

‘ರಸ್ತೆಗಳು ಹಾಳಾಗಿ ಹಲವು ತಿಂಗಳಾದರೂ ದುರಸ್ತಿ ಕಂಡಿಲ್ಲ. ಬೈಕ್‌ ಸವಾರರಂತೂ ಆಗಾಗ ಬಿದ್ದು ಗಾಯಗೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷದವರು ಪರಸ್ಪರ ಆರೋಪದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಜನರು ಮಾತ್ರ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಕಣ್ಮುಚ್ಚಿ ಕುಳಿತ ಎಂಜಿನಿಯರ್‌ಗಳು’

ರಾಣೆಬೆನ್ನೂರು–ಗುತ್ತಲ–ದೇವರಗುಡ್ಡ ರಸ್ತೆಯು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ. ರಸ್ತೆ ತೀರಾ ಹದಗೆಟ್ಟು ಹೋಗಿದ್ದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ‘ರಸ್ತೆಗಳು ಹಾಳಾಗಿ ಜನರು ತೊಂದರೆ ಅನುಭವಿಸುತ್ತಿದ್ದರು ಎಂಜಿನಿಯರ್‌ಗಳು ಮೌನವಾಗಿದ್ದಾರೆ. ಎ.ಸಿ. ಕಚೇರಿಯಲ್ಲಿ ಕುಳಿತುಕೊಂಡು ಮಾತನಾಡುವ ಎಂಜಿನಿಯರ್‌ಗಳಿಗೆ ಸಾಮಾನ್ಯ ಜನರ ಕಷ್ಟ ಏನು ಗೊತ್ತು. ಇನ್ನಾದರೂ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ತಮ್ಮಿಂದ ಈ ಕೆಲಸ ಆಗದಿದ್ದರೆ ಎಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು’ ಎಂದು ಜನರು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.